ಸಾಹಿತ್ಯ ಸಮ್ಮೇಳನದಲ್ಲಿ ಸದ್ದು ಮಾಡಿದ ರಾಜಕೀಯ

Update: 2019-09-13 18:31 GMT

  2017ರ ನವೆಂಬರ್‌ನಲ್ಲಿ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಚಂದ್ರಶೇಖರ ಪಾಟೀಲರು ವಹಿಸಿದ್ದರು. ತಮ್ಮ ಮಾತುಗಳ ಮೂಲಕ ಸದಾ ವಿವಾದಾತ್ಮಕವಾಗಿರುವ, ಸಾಹಿತ್ಯ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿರುವ ಚಂದ್ರ ಶೇಖರ ಪಾಟೀಲರ ಅಧ್ಯಕ್ಷತೆ ಎನ್ನುವ ಕಾರಣಕ್ಕಾಗಿಯೇ ಈ ಸಮ್ಮೇಳನ ಮಹತ್ವವನ್ನು ಪಡೆದುಕೊಂಡಿತ್ತು. ಸಮ್ಮೇಳನ ಬೇರೆ ಬೇರೆ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಚರ್ಚೆಗೊಳಗಾಯಿತು. ಚಂಪಾ ಅವರ ಭಾಷಣವೂ ಈ ಚರ್ಚೆಗಳಿಗೆ ಪೂರಕವಾಗಿ ಕೆಲಸ ಮಾಡಿತ್ತು. ಪ್ರಜಾಪ್ರಭುತ್ವದಲ್ಲಿ ಇಂಥ ಗಳಿಗೆಗಳು ಕಾಲಗರ್ಭದಲ್ಲಿ ಹುದುಗಿ ಹೋಗದೆ, ಅವು ದಾಖಲೆಗಳಾಗಿ ಉಳಿದು, ಇತಿಹಾಸದ ಚಲನೆಗೆ ಕಾರಣವಾಗಬೇಕು ಎನ್ನುವ ಉದ್ದೇಶದಿಂದ ನ. ಭ. ರಾಮಲಿಂಗ ಶೆಟ್ಟಿ ಅವರು ಆ ಸಮ್ಮೇಳನವನ್ನು ಕೇಂದ್ರವಾಗಿಟ್ಟುಕೊಂಡು ಪುಸ್ತಕವನ್ನು ಸಂಪಾದಿಸಿದ್ದಾರೆ. ‘ಮೈಸೂರು ಸಾಹಿತ್ಯ ಸಮ್ಮೇಳನದ-ಆಜೂ ಬಾಜು’ ಎಂದು ಈ ಕೃತಿಗೆ ಹೆಸರಿಟ್ಟಿದ್ದಾರೆ. ಸಮ್ಮೇಳನಕ್ಕೆ ಮುನ್ನ ಮತ್ತು ಆನಂತರ ಬಂದ ಲೇಖನಗಳು, ಸಂದರ್ಶನಗಳು ಅಲ್ಲದೇ, ಚಂದ್ರಶೇಖರ ಪಾಟೀಲರ ಅಧ್ಯಕ್ಷ ಭಾಷಣವನ್ನೂ ಈ ಕೃತಿ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳು ಸಾಹಿತ್ಯ ಜಾತ್ರೆಯಾಗಿ ಮುಗಿದು ಹೋಗುವುದಕ್ಕೆ ಬಿಡದೆ, ಅದರ ತರಂಗ ಸದಾ ಉಳಿಯುವಂತೆ ಈ ಕೃತಿ ಮಾಡಿದೆ.

ಈ ಕೃತಿಯ ಬಹುತೇಕ ಬರಹಗಳು, ಸಂದರ್ಶನಗಳು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರನ್ನು ಕೇಂದ್ರವಾಗಿಟ್ಟುಕೊಂಡಿದೆ. ಆದುದರಿಂದ ಈ ಕೃತಿಯು ಚಂದ್ರಶೇಖರ ಪಾಟೀಲರ ಬರಹ, ಬದುಕು, ಮಾತುಗಳನ್ನು ಬೇರೆ ಬೇರೆ ನೆಲೆಗಳಲ್ಲಿ ನಮಗೆ ಪರಿಚಯಿಸುತ್ತದೆ. ಸಮ್ಮೇಳನಾಧ್ಯಕ್ಷರಾಗಿ ಯಾರೇ ಆಯ್ಕೆಯಾಗಲಿ, ಅವರ ಕುರಿತಂತೆ ವಿವಿಧ ಪತ್ರಿಕೆಗಳು ಬರೆಯುತ್ತವೆ. ಸಂದರ್ಶನಗಳನ್ನು ಮಾಡುತ್ತವೆ. ಅಂತಹ ಲೇಖನ, ಸಂದರ್ಶನಗಳು ಇಲ್ಲಿವೆ. ಚಂದ್ರಶೇಖರ ಪಾಟೀಲರ ಮಾತುಗಳ ಕುರಿತಂತೆ ವಿವಿಧ ಪತ್ರಿಕೆಗಳಲ್ಲಿ ಬಂದ ಟೀಕೆ, ವಿಮರ್ಶೆಗಳು ಕೂಡ ಇಲ್ಲಿವೆ. ಮೊದಲ ಹದಿನೈದು ಲೇಖನಗಳು ಚಂದ್ರಶೇಖರ ಪಾಟೀಲರ ಬದುಕು, ಬರಹಗಳಿಗೆ ಸೀಮಿತವಾಗಿವೆ. ಬಳಿಕ ಚಂದ್ರಶೇಖರ ಪಾಟೀಲರ ಭಾಷಣವನ್ನು ಕೃತಿಯಲ್ಲಿ ನೀಡಲಾಗಿದೆ. ಆ ಬಳಿಕದ 13 ಲೇಖನಗಳು ಸಮ್ಮೇಳನಾಧ್ಯಕ್ಷರ ಮಾತುಗಳ ಸರಿತಪ್ಪುಗಳನ್ನು ವಿಶ್ಲೇಷಿಸುತ್ತವೆ. ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಮತ್ತು ಜಾತ್ಯತೀತವಾಗಿರುವ ಸರಕಾರ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂಬ ಚಂಪಾ ಮಾತುಗಳು ರಾಜಕೀಯವಾಗಿ ವಿವಾದಕ್ಕೊಳಗಾಗುವುದು ಸಹಜವೇ ಆಗಿದೆ. ಆದರೆ ಕೆಲವು ನಿರ್ದಿಷ್ಟ ಪಕ್ಷಗಳು ಈ ಕರೆಯನ್ನು ಪೂರ್ವಾಗ್ರಹ ಪೀಡಿತವಾಗಿ ಚರ್ಚಿಸತೊಡಗಿರುವುದರಿಂದ ಟೀಕೆ, ಪ್ರತಿಟೀಕೆಗಳು ಬಂದವು. ಅವೆಲ್ಲವನ್ನೂ ಈ ಕೃತಿಯಲ್ಲಿ ಒಂದಾಗಿ ಜೋಡಿಸಲಾಗಿದೆ.

ಸ್ನೇಹ ಬುಕ್ ಹೌಸ್ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 168 ಪುಟಗಳ ಈ ಕೃತಿಯ ಮುಖಬೆಲೆ 130 ರೂಪಾಯಿ. ಆಸಕ್ತರು 98450 31335 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News