ಹೆಣ್ಣಿನ ಒಳ ಸಂಕಟಗಳನ್ನು ಹೇಳುವ ‘ಮೋದಾಳಿ’

Update: 2019-09-15 18:29 GMT

ವಿತೆ, ಕತೆಗಳ ಕುರಿತಂತೆ ತೋರಿಸುವ ಆಸಕ್ತಿಯನ್ನು ಹೊಸ ತಲೆಮಾರು ನಾಟಕ ಸಾಹಿತ್ಯದಲ್ಲಿ ತೋರಿಸುತ್ತಿಲ್ಲ ಎನ್ನುವ ಆಕ್ಷೇಪಗಳು ವ್ಯಾಪಕವಾಗಿ ಕೇಳಿ ಬರುತ್ತವೆ. ಅದಕ್ಕೆ ಕಾರಣಗಳೂ ಇವೆ. ಮುಖ್ಯವಾಗಿ ರಂಗಭೂಮಿಯ ಚಟುವಟಿಕೆಗಳೇ ಕ್ಷೀಣವಾಗಿರುವ ಕಾಲ ಇದು. ಅಪಾರ ಸಮಯ, ಶ್ರಮ, ತಾಳ್ಮೆ, ಶ್ರದ್ಧೆ ಇತ್ಯಾದಿಗಳನ್ನು ಬೇಡುವ ಕಾರಣಕ್ಕಾಗಿಯೇ ಹೊಸ ತಲೆಮಾರಿನ ಬರಹಗಾರರು ರಂಗಭೂಮಿಯಿಂದ ದೂರವಿದ್ದಾರೆ. ರಂಗಭೂಮಿಯ ಪ್ರಭಾವವಿಲ್ಲದೆ ನಾಟಕ ಸಾಹಿತ್ಯಗಳನ್ನು ರಚಿಸುವುದು ಕಷ್ಟ. ಈ ಕಾರಣಕ್ಕಾಗಿ ರಂಗಕರ್ಮಿಗಳು ಕತೆಗಳನ್ನು, ಕಾದಂಬರಿಗಳನ್ನೇ ನಾಟಕ ರೂಪಕ್ಕಿಳಿಸುವಂತಹ ಸ್ಥಿತಿ ಬಂದಿದೆ ಅಥವಾ ಹಳೆಯ ನಾಟಕಗಳನ್ನೇ ಹೊಸ ರೂಪದಲ್ಲಿ ಪ್ರಯೋಗಕ್ಕಿಳಿಸುವ ಅನಿವಾರ್ಯವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕವಯತ್ರಿ, ಕತೆಗಾರ್ತಿಯಾಗಿರುವ ಪಿ. ಚಂದ್ರಿಕಾ ಅವರು ಇದೀಗ ನಾಟಕ ಸಾಹಿತ್ಯಕ್ಕೆ ಕಾಲಿಟ್ಟಿರುವುದು ಅಭಿನಂದನೀಯ. ವಡ್ಡಾರಾಧನೆಯ ಕತೆಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಪಿ. ಚಂದ್ರಿಕಾ ಅವರು ‘ಮೋದಾಳಿ’ ನಾಟಕ ಕೃತಿಯನ್ನು ಹೊರತಂದಿದ್ದಾರೆ. ಪ್ರಾಚೀನವೂ, ಸಮಕಾಲೀನವೂ ಆಗಿರುವ ವಸ್ತುವನ್ನು ಈ ನಾಟಕ ಚಿತ್ರಿಸುತ್ತದೆ. ಕ್ರಿ. ಶ. ಹತ್ತನೆಯ ಶತಮಾನದ್ದು ಎಂದು ಹೇಳಲಾಗಿರುವ ಶಿವಕೋಟ್ಯಾಚಾರ್ಯನ ‘ವಡ್ಡಾರಾಧನೆ’ಯ ಒಂದು ಕತೆಯ ಒಳಗಿನ ಇನ್ನೊಂದು ಕತೆಯಲ್ಲಿ ಸಿಗುವ ವೃತ್ತಾಂತದ ಸಣ್ಣ ಪ್ರಸಂಗವೊಂದನ್ನು ವಿಸ್ತರಿಸಿ ಚಂದ್ರಿಕಾ ನಾಟಕವನ್ನು ರಚಿಸಿದ್ದಾರೆ.

‘ಮೋದಾಳಿ’ ತನ್ನ ಇಬ್ಬರು ಗಂಡಂದಿರಿಂದ ಪ್ರೀತಿಯನ್ನಾಗಲಿ, ದಾಂಪತ್ಯದ ಸಹಚರ್ಯವನ್ನಾಗಲಿ ಪಡೆಯಲಾಗದೆ, ನಡುವಯಸ್ಸಿನ ಗಂಡಸೊಬ್ಬನ ಜೊತೆಗೆ ಸಂಬಂಧ ಬೆಳೆಸಿ, ಅವನಿಂದಲೂ ತಿರಸ್ಕೃತಳಾಗುವ ಓರ್ವ ಹೆಣ್ಣಿನ ಕತೆ. ಈ ಕತೆಯ ಕೆಲವು ಪ್ರಾಥಮಿಕ ಅಂಶಗಳನ್ನು ಇಟ್ಟುಕೊಂಡು ನಾಟಕವನ್ನು ಬೆಳೆಸಲಾಗಿದೆ. ಈ ನಾಟಕದ ಕುರಿತು ಸುದೀರ್ಘ ಮುನ್ನುಡಿಯೊಂದನ್ನು ಜಿ. ರಾಜಶೇಖರ್ ಬರೆದಿದ್ದಾರೆ. ‘‘ಚಂದ್ರಿಕಾ ಅವರ ನಾಟಕ, ಹೆಣ್ಣು ಅನುಭವಿಸುವ ಅವಮಾನ, ತಿರಸ್ಕಾರ, ಯಾತನೆ ಮತ್ತು ಹಿಂಸೆಗಳ ಒಂದು ನಿರೂಪಣೆಯಾಗಿರುವುದರ ಜೊತೆಗೆ ಧರ್ಮದ ಆಚರಣೆ ಮತ್ತು ಧರ್ಮದ ಪಾಲನೆಗಳ ನಡುವಿನ ಅಂತರದ ಕುರಿತ ಒಂದು ವಿಮರ್ಶೆಯೂ ಆಗಿದೆ. ....ಹಿಂಸೆಯನ್ನು ಅತಿಗೆ ಒಯ್ದು ನಾಟಕ ಕಟ್ಟಿಕೊಡುವ ಬದುಕಿನ ವಾಸ್ತವ ಅತ್ಯಂತ ಕರಾಳವಾಗಿದೆ’’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಬೆನ್ನುಡಿಯಲ್ಲಿ ಖ್ಯಾತ ಕತೆಗಾರ್ತಿ ವೈದೇಹಿ ಅವರು ‘‘....ನಾಟಕ ಓದಿ ಮುಗಿಯುತ್ತಲೂ ಈ ಜಗತ್ತು ಬದಲಾಗಿದೆಯೇ? ಅಂತೆಯೇ ಇದೆಯೇ? ಬದಲಾಗಿದ್ದರೆ ಅದು ಎಲ್ಲಿ? ಯಾರ ಪಾಲಿಗೆ? ಇತ್ಯಾದಿ ಅನೇಕ ಪ್ರಶ್ನೆಗಳಲ್ಲಿ ಮನಸ್ಸು ಒಳಮುಖವಾಗುತ್ತದೆ’’ ಎಂದು ಬರೆಯುತ್ತಾರೆ. ಹತ್ತನೇ ಶತಮಾನದ ವಡ್ಡಾರಾಧನೆಯ ಕಥೆಯನ್ನು ವರ್ತಮಾನದ ಹೆಣ್ಣಿನ ಒಳಗುದಿಗಳನ್ನು ಹೇಳಲು ಬಳಸಿಕೊಂಡ ನಾಟಕಕಾರ್ತಿಯ ತಂತ್ರ ಇಲ್ಲಿ ಯಶಸ್ವಿಯಾಗಿದೆ. ಮೋದಾಳಿ ನಾಟಕವನ್ನು ಶಿವಮೊಗ್ಗದ ‘ರಂಗಬೆಳಕು’ ತಂಡದವರು ಸುಮಾರು ಇಪ್ಪತ್ತು ಪ್ರದರ್ಶನಗಳನ್ನು ಮಾಡಿದ್ದಾರೆ.

ಅಭಿನವ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 88 ಪುಟಗಳ ಈ ಕೃತಿಯ ಮುಖಬೆಲೆ 75 ರೂ. ಆಸಕ್ತರು 94488 04905 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News