ನಾವೇ ಮೈತ್ರಿಗೆ ಇತಿಶ್ರೀ ಹಾಡಿದ್ದೇವೆ: ಎಚ್.ಡಿ.ದೇವೇಗೌಡ

Update: 2019-09-21 11:53 GMT

ಬೆಂಗಳೂರು, ಸೆ. 21: ಉಪ ಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಏಕಾಂಕ್ಷಿಯಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಉಪ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಳೆ ಪಕ್ಷದ ಮುಖಂಡರ ಸಭೆ ಕರೆದಿದ್ದು, ಶೀಘ್ರವೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದರು.

ಮೈತ್ರಿಗೆ ಇತಿಶ್ರೀ: ಮೂರು ತಿಂಗಳಿಂದ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಜತೆ ಮೈತ್ರಿ ಬೇಡ ಎಂದು ಎಲ್ಲರೂ ತಿಳಿಸಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಆ ಪಕ್ಷದಲ್ಲಿ ಗೊಂದಲವಿದೆ. ಹೀಗಾಗಿ ಜೆಡಿಎಸ್ ಮೈತ್ರಿ ತೀರ್ಮಾನ ಮಾಡುವುದು ಅವರಿಗೆ ತಲೆ ನೋವು ಆಗುವುದು ಬೇಡ ಎಂದು ನಾವೇ ಮೈತ್ರಿಗೆ ಇತಿಶ್ರೀ ಹಾಡಿದ್ದೇವೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

ಉಪ ಚುನಾವಣೆ ಇಷ್ಟು ಬೇಗ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಸೋಲು- ಗೆಲುವು ಆಮೇಲೆ ತೀರ್ಮಾನವಾಗಲಿದೆ. ಎಷ್ಟು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ನಾಳೆ ಮುಖಂಡರ ಸಭೆಯಲ್ಲಿ ಅಂತಿಮ ಗೊಳಿಸಲಾಗುವುದು ಎಂದ ಅವರು, ಕಾಂಗ್ರೆಸ್ ಸಹವಾಸ ಬೇಡ ಎಂಬ ಕಾರ್ಯಕರ್ತರ ಮಾತಿಗೆ ಬೆಲೆ ಕೊಟ್ಟು ಸ್ವತಂತ್ರ ಸ್ಪರ್ಧೆಗೆ ತೀರ್ಮಾನಿಸಲಾಗಿದೆ ಎಂದರು.

‘ಅಕ್ಟೋಬರ್ 21ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಕುಮಾರಸ್ವಾಮಿ ಅವರ ನೇತೃತ್ವದ ಬಹುಮತ ಸರಕಾರವನ್ನು ವಾಮಮಾರ್ಗದಿಂದ ಕೆಡವಿದವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ’

-ಜೆಡಿಎಸ್ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News