ನೆರೆ ಪೀಡಿತರ ಸಾಲ ಮರುಪಾವತಿ ಮಂದೂಡಿ ಸರ್ಕಾರ ಆದೇಶ: ಸದುಪಯೋಗ ಪಡೆಯುವಂತೆ ಶಿವಮೊಗ್ಗ ಡಿಸಿ ಕರೆ
ಶಿವಮೊಗ್ಗ, ಸೆ. 30: ನೆರೆ ಬಾಧಿತ ಪ್ರದೇಶಗಳಲ್ಲಿ ಸಾರ್ವಜನಿಕರು ಬ್ಯಾಂಕ್ಗಳಲ್ಲಿ ಪಡೆದ ಸಾಲಗಳ ಪುನರ್ ರಚನೆ ಅಥವಾ ಮರುಪಾವತಿಗೆ ಕಂತುಗಳ ಮುಂದೂಡಿಕೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಜನರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ನೀಡಿಕೆಯಲ್ಲಿನ ಬೆಳವಣಿಗೆ ಹಾಗೂ ವಿಳಂಬದ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂತುಗಳ ಮುಂದೂಡಿಕೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಯನ್ನು, ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಸಾಲದ ಕಂತುಗಳನ್ನು ಮುಂದೂಡುವುದರ ಜೊತೆಗೆ ಬೆಳೆದ ಬೆಳೆಗೆ ಎಕರೆವಾರು ನಿಗದಿಪಡಿಸಿದ ಸಾಲವನ್ನು ಸಹ ರೈತರು ಪಡೆಯಬಹುದಾಗಿದ್ದು, ಈ ಕುರಿತು ಬ್ಯಾಂಕ್ ಸಿಬ್ಬಂದಿಗಳು ರೈತರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಈ ವಿಷಯದಲ್ಲಿ ತಾತ್ಸಾರ ಹಾಗೂ ವಿಳಂಬ ಮಾಡದಂತೆ ಅವರು ಸೂಚಿಸಿದರು.
ರೈತರು ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಸಾಲ ಮರುಪಾವತಿಗೆ ಕಿರುಕುಳ ನೀಡುವುದು ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಈ ಕುರಿತು ಬ್ಯಾಂಕ್ ಅಧಿಕಾರಿಗಳು ರೈತರಿಗೆ ತೊಂದರೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮುದ್ರಾ, ಪ್ರಧಾನಮಂತ್ರಿ ಜನ್ ಧನ್, ಪ್ರಧಾನಮಂತ್ರಿ ಅವಾಸ್ ಯೋಜನೆ, ಗ್ರೀನ್ ಅಕೌಂಟ್ ಯೋಜನೆಗಳಡಿ ನೀಡಲಾದ ಸಾಲದಲ್ಲಿ ಸಾಧಿಸಿದ ಪ್ರಗತಿ ಹಾಗೂ ಸಾಧಿಸಬೇಕಾದ ಪ್ರಗತಿಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬ್ಯಾಂಕ್ ವ್ಯವಹಾರದಲ್ಲಿ ಆಧಾರ್ ತಂತ್ರಾಂಶ ಹಾಗೂ ಪಿಂಚಣಿಯನ್ನು ತಲುಪಿಸುವಲ್ಲಿ ತಂತ್ರಾಂಶದ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು. ಆಧಾರ್ ತಂತ್ರಾಂಶದ ತೊಂದರೆಗಳನ್ನು ಬಗೆಹರಿಸಲು ಸೇವಾ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ತಿಳಿಯುವಂತೆ ಸೇವಾ ಕೇಂದ್ರಗಳಲ್ಲಿ ಕನ್ನಡದ ನಾಮ ಫಲಕಗಳನ್ನು ಅಳವಡಿಸುವಂತೆ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಕೆನರಾ ಬ್ಯಾಂಕ್ ಎಜಿಎಂ ರಾಘವೇಂದ್ರ ರಾವ್, ಆರ್ಬಿಐ ಎಜಿಎಂ ರಾಜ್ ಗೋಪಾಲ್ ಬಿ, ನಬಾರ್ಡ್ ಡಿಡಿಎಂ ರವಿ, ಎಲ್ಡಿಡಿಎಂ ಸೋಲೋಮನ್ ಮೆನೆಜೆಸ್ ಸೇರಿದಂತೆ ಮೊದಲಾದವರಿದ್ದರು.