ಸುತ್ತೂರು ಶ್ರೀ ಫೋನ್ ಕದ್ದಾಲಿಕೆ ಆಗಿದೆಯೇ ಎಂಬುದು ತನಿಖೆಯಿಂದ ಬಹಿರಂಗ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-02 07:11 GMT

ಮೈಸೂರು, ಅ.2: ಸುತ್ತೂರು ಶ್ರೀಗಳ ಫೋನ್ ಕದ್ದಾಲಿಕೆ ಆಗಿದೆಯೋ ಇಲ್ಲವೊ ನನಗೆ ಗೊತ್ತಿಲ್ಲ. ತನಿಖೆ ನಂತರ ಎಲ್ಲಾ ಸತ್ಯ ಬಹಿರಂಗವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರ ಯಾರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ.  ಸುತ್ತೂರುಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಫೋನ್ ಕದ್ದಾಲಿಕೆಯಾಗಿದೆಯೋ ಇಲ್ಲವೊ ಸಿಬಿಐ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದರು.

ಇನ್ನು ಕೇಂದ್ರದ ಬರ ಪರಿಹಾರ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಿಎಂ, ಪರಿಹಾರ ಬಿಡುಗಡೆ ಮಾಡಲು  ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಯಾರ ಶಿಫಾರಸು ಬೇಕಿಲ್ಲ. ಯಾವ ರಾಜ್ಯಕ್ಕೂ ಪರಿಹಾರ ಕೊಟ್ಟಿಲ್ಲ, ವಿರೋಧ ಪಕ್ಷದವರು ಸುಮ್ಮನೆ ಜನರಲ್ಲಿ ಗೊಂದಲವುಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿದೇಶದಿಂದ ಈಗಷ್ಟೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ, ಅವರು ಬಹಳ ಬುದ್ಧಿವಂತರು, ಯಾವ ರಾಜ್ಯಗಳಿಗೆ ಎಷ್ಟು ಪರಿಹಾರ ನೀಡಬೇಕು ಎಂಬುದು ಗೊತ್ತಿದೆ. ನಾವು ಯಾವುದೇ ನಿಯೋಗ ಕರೆದುಕೊಂಡು ಹೋಗಬೇಕಿಲ್ಲ, ರಾಜ್ಯದ ನೆರೆ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಆದಷ್ಟು ಶೀಘ್ರದಲ್ಲಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News