ಹೆಚ್ಚುವರಿ ಕಬ್ಬು ಅರೆಯಲು ಅಗತ್ಯ ಕ್ರಮ: ಸಚಿವ ಅಶೋಕ್
ಮಂಡ್ಯ, ಅ.4: ಮಂಡ್ಯ ಭಾಗದಲ್ಲಿ ಹೆಚ್ಚು ಬೆಳೆದಿರುವ ಕಬ್ಬನ್ನು ಅರೆಯಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ರೈತರೊಡನೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷ ಮೈಷುಗರ್, ಪಿಎಸ್ಎಸ್ಕೆ ಆರಂಭಿಸಲು ಕ್ರಮವಹಿಸಲಾಗುವುದು ಎಂದರು.
ಸುಮಾರು 34.19 ಲಕ್ಷ ಕಬ್ಬು ಟನ್ ಬೆಳೆಯಲಾಗಿದೆ. 13.02 ಲಕ್ಷ ಕಬ್ಬು ಅರೆಯಲು ವ್ಯವಸ್ಥೆಯಾಗಿದ್ದು, ಉಳಿದಂತಹ ಕಬ್ಬನ್ನು ಅರೆಯಲು ಮುಂದಿನ ತಿಂಗಳು 15 ರಂದು ಪ್ರಾರಂಭವಾಗುತ್ತಿರುವ ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ 3 ಸಾವಿರ ಲಕ್ಷ ಟನ್ ಕಬ್ಬನ್ನು ಅರೆದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ರೈತರು ಹಾಗೂ ರೈತ ಮುಖಂಡರು ಸಲಹೆ ಕೊಟ್ಟಿರುವಂತೆ, ಸಾಗಾಣಿಕಾ ವೆಚ್ಚ ರೈತರ ಮೇಲೆ ಜಾಸ್ತಿ ಬೀಳುತ್ತಿದೆ. ಇದನ್ನು ಕಾರ್ಖಾನೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸತ್ಯಮಂಗಲದಲ್ಲಿರುವ ಬನ್ನಾರಿ ಅಮ್ಮನ್ ಕಾರ್ಖಾನೆಯವರ ಜತೆ ಕೂಡ ಸಾಗಣಿಕಾ ವೆಚ್ಚ ಕುರಿತಂತೆ ಚರ್ಚೆ ನಡೆಸಲಾಗಿದೆ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದರಲ್ಲಿ ಸರಕಾರ ಶೇಕಡ ಎಷ್ಟು ಭರಿಸಬೇಕು ಎಂಬುದನ್ನು ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೆಆರ್ಎಸ್ ಜಲಾಶಯ ಸುತ್ತಮುತ್ತ ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇಂದಿನಿಂದ ಗಣಿಗಾರಿಕೆ ಸಂಪೂರ್ಣವಾಗಿ ಮಟ್ಟ ಹಾಕಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ಅವರು ಹೇಳಿದರು.
ಸಭೆಯಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎಸ್.ಸುರೇಶ್, ಸುನೀತಾ ಪುಟ್ಟಣ್ಣಯ್ಯ, ಮುದ್ದೇಗೌಡ, ಸುನಂದ ಜಯರಾಂ, ಕೆ.ಟಿ.ಗೋವಿಂದೇಗೌಡ, ಕೆಂಪೂಗೌಡ, ಸುಧೀರ್ಕುಮಾರ್, ಕೀಳಘಟ್ಟ ನಂಜುಂಡಯ್ಯ, ಸಿದ್ದೇಗೌಡ, ಲತಾ ಶಂಕರ್, ಇತರೆ ರೈತಮುಖಂಡರು, ಡಿಸಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಎಸ್ಪಿ ಕೆ.ಪರಶುರಾಮ್, ಆಹಾರ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಶರತ್ ಉಪಸ್ಥಿತರಿದ್ದರು.