ಶೋಕಾಸ್ ನೋಟಿಸ್: ಪ್ರಧಾನಿಗೆ ಪತ್ರ ಬರೆದ ಶಾಸಕ ಯತ್ನಾಳ್ ಹೇಳಿದ್ದೇನು?

Update: 2019-10-08 17:03 GMT

ವಿಜಯಪುರ, ಅ.8: ಕರ್ನಾಟಕದಲ್ಲಿ ನೆರೆಯಿಂದಾಗಿ ಸಾಕಷ್ಟು ಜನರು ಸಂತ್ರಸ್ಥರಾಗಿದ್ದಾರೆ. ಇಲ್ಲಿನ ಜನರು ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಾಗಾಗಿ ತಾವು ಆದಷ್ಟು ನೆರೆ ಪರಿಹಾರವನ್ನು ನೀಡಬೇಕು ಎಂದು ನಾನೊಬ್ಬ ಜನಪ್ರತಿನಿಧಿಯಾಗಿ ಆಗ್ರಹಿಸಿದ್ದೆ. ಇದರಲ್ಲಿ ಯಾವುದೇ ರಾಜಕೀಯ ವಿಚಾರವಿಲ್ಲ. ನಾನು ಹಾಗೂ ಕರ್ನಾಟಕದ ಜನತೆ ನಿಮ್ಮನ್ನು ಇಷ್ಟಪಡುತ್ತೇವೆ ಹಾಗೂ ಗೌರವಿಸುತ್ತೇವೆ. ಆ ಕಾರಣದಿಂದಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿಜಿ ಅವರಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಂಡಿದ್ದೇವೆ. ನಿಮ್ಮಿಂದಲೇ ಇಂದು ದೇಶ ಅತ್ಯುನ್ನತವಾಗಿ ಬೆಳವಣಿಗೆ ಆಗುತ್ತಿದೆ. ನಾನು ಮಾತನಾಡಿದ್ದು, ಸಂತ್ರಸ್ತರಿಗೆ ಸಹಾಯ ಮಾಡಿ ಎಂಬುದಾಗಿದೆ ಹೊರತಾಗಿ ಪಕ್ಷದ ವರ್ಚಸ್ಸು ಮತ್ತು ನಾಯಕರ ಅವಹೇಳನಕ್ಕೆ ಕಾರಣವಾಗಿಲ್ಲ. ನಾನು ನೀಡಿದ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆ ಹೊರತಾಗಿ ಪಕ್ಷಕ್ಕೆ ಧಕ್ಕೆ ಆಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗಲೂ ನಾನು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಸಲುವಾಗಿ ಹೋರಾಟ ಮಾಡಿದ್ದೇನೆ. ಆಗ ನಾನು ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆ ವೇಳೆ ವಾಜಪೇಯಿ ಅವರು ಸ್ಪಂದಿಸಿದ್ದರು. ಈಗಲೂ ನಾನು ಸಂತ್ರಸ್ಥರಿಗೆ ಪರಿಹಾರ ಸಿಗಬೇಕು ಎಂದು ಮಾತನಾಡಿದ್ದೇನೆ. ಹೊರತಾಗಿ ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿಲ್ಲ. ನಾನು ನಿಮ್ಮನ್ನು ವೈಯಕ್ತಿವಾಗಿ ಭೇಟಿಯಾಗಿ ಸಂತ್ರಸ್ತರ ಕುರಿತು ಮಾತನಾಡಬಯಸುತ್ತೇನೆ ಎಂದು ಯತ್ನಾಳ್ ಪತ್ರದ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News