ಪಾಂಡವಪುರ: ನೇಣು ಬಿಗಿದು ಯುವಕ ಆತ್ಮಹತ್ಯೆ

Update: 2019-10-08 18:50 GMT

ಪಾಂಡವಪುರ: ಸಾಲದ ಬಾಧೆಯಿಂದಾಗಿ ರೈತರೊಬ್ಬರ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಶಂಭೂನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಅನ್ನಪೂರ್ಣೇಶ್ವರ ಸ್ಟೋನ್ ಕ್ರಷರ್ ಬಳಿ ನಡೆದಿದೆ.

ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದ ನಿವಾಸಿ ಎಚ್.ಪಿ.ಲಿಂಗರಾಜು ಅವರ ಪುತ್ರ ಎಚ್.ಎಲ್.ಶಿವರಾಜಕುಮಾರ್ (31) ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

ಘಟನೆ ವಿವರ: ಪಾಂಡವಪುರ ಪಟ್ಟಣದ ಕಾರ್ಪೋರೇಷನ್ ಬ್ಯಾಂಕಿನಲ್ಲಿ ತನ್ನ ಅಜ್ಜ ಮಾಡಿದ್ದ ಸುಮಾರು 2.5ಲಕ್ಷ ರೂ. ಸಾಲದ ನೋಟೀಸ್ ಬರುತ್ತಿದ್ದ ಹಿನ್ನೆಲೆ ಹಾಗೂ ತಾನೂ ಖಾಸಗಿ ಲೇವಾದೇವಿದಾರರಿಂದ ಮಾಡಿದ್ದ ಸುಮಾರು 2 ಲಕ್ಷ ರೂ. ಸಾಲ ತೀರಿಸಲು ಸಾಲಗಾರರಿಂದ ತೀವ್ರ ಒತ್ತಡ ಬಂದ ಪರಿಣಾಮ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಈತ ತಾಲೂಕಿನ ಶಂಭೂನಹಳ್ಳಿ ಗ್ರಾಮದ ಬೋರಶೆಟ್ಟಿ ಎಂಬುವ ರೈತರ ಜಮೀನಿನ ಬಳಿ ಮರವೊಂದಕ್ಕೆ ರವಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗ್ಗೆ ಜಮೀನಿನ ಬಳಿ ಬಂದ ರೈತರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದ ಶಿವರಾಜಕುಮಾರನ ಮೃತದೇಹವನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಸಬ್ ಇನ್ಸ್‍ಪೆಕ್ಟರ್ ಸುಮಾರಾಣಿ, ಎಎಸ್‍ಐ ಪ್ರಮೋದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವವನ್ನು ಒಪ್ಪಿಸಲಾಗಿದೆ. ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News