ಅಪೌಷ್ಠಿಕತೆ, ಸಾಂಕ್ರಾಮಿಕ ರೋಗ ನಿಯಂತ್ರಿಸಿ ಆರೋಗ್ಯ ಭಾರತ ಕಟ್ಟಬೇಕು: ರಾಷ್ಟ್ರಪತಿ ಕೋವಿಂದ್

Update: 2019-10-11 17:48 GMT

ಮೈಸೂರು,ಅ.11: ಅಧುನಿಕ ಮತ್ತು ಸಾಂಪ್ರದಾಯಿಕ ಚಿಕಿತ್ಸೆ ಪದ್ಧತಿ  ಮೂಲಕ ಅಪೌಷ್ಠಿಕತೆ ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.

ಮೈಸೂರು ತಾಲ್ಲೂಕಿನ ವರುಣಾ ಗ್ರಾಮದ ಬಳಿ ಶುಕ್ರವಾರ ಜೆಎಸ್‍ಎಸ್ ಮಹಾವಿದ್ಯಾಪೀಠ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 104ನೇ ಜಯಂತಿ ಹಾಗೂ ಅಕಾಡೆಮಿಯ ನೂತನ ಸಮುಚ್ಚಯ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ನಾವೆಷ್ಟೆ ಮುಂದುವರೆದಿದ್ದರೂ ಅಪೌಷ್ಠಿಕತೆ ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಯೋಗ, ಆರ್ಯುವೇಧ, ಹೋಮಿಯೋಪತಿ, ಯುನಾನಿ ಸೇರಿದಂತೆ ಹಲವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಂಡು ಅಪೌಷ್ಠಿಕತೆ ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಿ ಆರೋಗ್ಯ ಭಾರತ ಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಶ್ರೀ ರಾಜೇಂದ್ರ ಸ್ವಾಮೀಜಯ ದೂರದೃಷ್ಟಿಯ ಫಲವಾಗಿ ಸಂಸ್ಥೆಯು ಸಾಕಷ್ಟು ಸಾಧನೆ ಮಾಡಿದೆ. ಹಿರಿಯ ಶ್ರೀಗಳಿಂದ ಆರಂಭವಾದ ಮಹಾವಿದ್ಯಾಪೀಠವು ಈಗ 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಾಗೂ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಜಯಚಾಮರಾಜ ಒಡೆಯರ್ ಅವರು ರಾಜೇಂದ್ರ ಶ್ರೀಗಳ ಸಾಮಾಜಿಕ ಸೇವೆಯನ್ನು ಕಂಡು ರಾಜಗುರು ತಿಲಕ ಎಂದು ಕರೆದಿದ್ದರು. ಅವರ 104ನೇ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಅಕಾಡೆಮಿಗೆ ಶಿಲನ್ಯಾಸ ನೆರವೇರಿಸುತ್ತಿರುವುದು ಹೆಮ್ಮೆಯ ಸಂಗತಿ. ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ದೇಶದ ಪ್ರಮುಖ ವಿಶ್ವವಿದ್ಯಾನಿಲಯದ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸುತ್ತೂರು ಮಠವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಕಾರ್ಮಿಕ ತಳಹದಿಯ ಮೇಲಿದೆ. ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಉತ್ತೇಜನದಿಂದಾಗಿ 2008 ರಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಅಕಾಡಮಿಯಾಗಿ ಮಾರ್ಪಟ್ಟಿದೆ. ಆರೋಗ್ಯ ವಿಜ್ಞಾನದಲ್ಲಿಯೂ ಕನ್ನಡ ಸಂಸ್ಥೆಯಾಗಿ ಬೆಳೆದಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರ‍್ಯಾಂಕಿಂಗ್ನಲ್ಲಿ ದೇಶದ 857 ವಿವಿಗಳ ಪೈಕಿ ಜೆಎಸ್‍ಎಸ್ ವಿವಿ 37ನೇ ಸ್ಥಾನಗಳಿಸಿದೆ. ದಿ ಟೈಮ್ಸ್‍ನ ಸಮೀಕ್ಷೆಯಂತೆ 2019ರಲ್ಲಿ ಈ ವಿವಿಯು 64ನೇ ರ‍್ಯಾಂಕ್ ಪಡೆದುಕೊಂಡಿದೆ. ಇದಕ್ಕಾಗಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಅವರು ಹೇಳಿದರು.

ರಾಜ್ಯಪಾಲ ವಜೂಭಾಯಿ ರೂಡಾಭಾಯಿ ವಾಲಾ ಮಾತನಾಡಿ, ನಮಗೆ ಮಂದಿರಗಳಿಗಿಂತ ಹೆಚ್ಚಾಗಿ ವಿದ್ಯಾಮಂದಿರ ತೆರೆಯುವ ಅಗತ್ಯವಿದೆ. ಈ ಕೆಲಸವನ್ನು ಸುತ್ತೂರು ಮಠವು ಮಾಡುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದೆ. ಹೀಗೆ ಮಂದಿರಗಳಿಗಿಂತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಶೇ.100 ರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯ, ನಾವು ದುಡಿದು ಸಂಪಾದಿಸಿದ ಹಣದಲ್ಲಿ ಶೇ.10 ರಷ್ಟನ್ನು ಇಂತಹ ಮಠ ಮಂದಿರಗಳಿಗೆ ನೀಡಿದಾಗ ಅದು ಜನೋಪಕಾರಿ ಕೆಲಸಗಳಿಗೆ ಬಳಕೆಯಾಗುತ್ತದೆ ಎಂದು ಹೇಳಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಅಕ್ಯಾಡೆಮಿ ನಡೆದು ಬಂದ ದಾರಿಯ ಕುರಿತ ಕಿರುಹೊತ್ತಿಗೆ ಬಿಡುಗಡೆಗೊಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಸುತ್ತೂರು ಶ್ರೀ ಮಠವು ಅನ್ನ, ಅಕ್ಷರ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಶಿಕ್ಷಣ ಸೇವೆಯ ಮೂಲಕ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದೆ. ಸುಮಾರು ಒಂದು ಸಾವಿರ ಇತಿಹಾಸವುಳ್ಳ  ಈ ಮಠವು ಗಂಗರಿಗೂ-ಚೋಳರಿಗೂ ಯುದ್ಧವಾಗುವುದನ್ನು ತಪ್ಪಿಸುವ ಮೂಲಕ ಶಾಂತಿಯ ಪ್ರತೀಕವಾಗಿದೆ. ಶ್ರೀಗಳು ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ನ್ಯಾಕ್‍ನಿಂದ ಮಾನ್ಯತೆ ಪಡೆದಿದೆ. ಯುಜಿಸಿಯಿಂದ ಉತ್ತಮ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು.

ರಾಷ್ಟ್ರತಿ ಅವರ ಪತ್ನಿ ಸವಿತಾ ಕೋವಿಂದ್, ವಿಶೇಷ ಆಹ್ವಾನಿತರಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ವೇದಿಕೆಯಲ್ಲಿದ್ದರು. ಚಾಮರಾಜನಗರ ಲೋಕಸಭಾ ಸದಸ್ಯ ವಿ.ಶ್ರೀನಿವಾಸಪ್ರಸಾದ್, ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಭಿಕರ ಸಾಲಿನಲ್ಲಿ ಕುಳಿತಿದ್ದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಅಕ್ಯಾಡೆಮಿಯ ಸಮ ಕುಲಾಧಿಪತಿ ಪ್ರೊ.ಬಿ.ಸುರೇಶ್ ಸ್ವಾಗತಿಸಿದರು. ಕುಲಪತಿ ಪ್ರೊ.ಬಸನಗೌಡಪ್ಪ ಕಾರ್ಯಕ್ರಮ ನಿರೂಪಿಸಿದರು.

ಜಯಚಾಮರಾಜ ಒಡೆಯರ್ ಹಾಗೂ ರಾಜೇಂದ್ರ ಶ್ರೀಗಳ ನಡುವೆ ಗುರು ಶಿಷ್ಯರ ಸಂಬಂಧ ಇತ್ತು. ಅನೇಕ ಸ್ಥಗಳನ್ನು ಜೆಎಸ್‍ಎಸ್ ಸಂಸ್ಥೆಗೆ ಜಯಚಾಮರಾಜ ಒಡೆಯರ್ ನೀಡಿದ್ದಾರೆ. ಹಾಗಾಗಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಲು ಸಾಧ್ಯವಾಯಿತು. ಇಲ್ಲಿ ಅಕಾಡೆಮಿ ಸ್ಥಾಪಿಸಲಾಗಿದ್ದು, ಶೇ.25 ರಷ್ಟು ಮಾತ್ರ ಕಟ್ಟಡ ನಿರ್ಮಾಣವಾಗುತ್ತದೆ. ಉಳಿದದ್ದು ಹಸಿರೀಕರಣಗೊಳಿಸಲಾಗುವುದು. ಮಳೆ ನೀರು ಕೊಯ್ಲು ಮೂಲಕ ಪರಿಸರಕ್ಕೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ.

-ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News