ಈಗ ಯಡಿಯೂರಪ್ಪರಲ್ಲಿ ಗುಡುಗು-ಮಿಂಚು ಯಾವುದೂ ಇಲ್ಲ: ಸಿದ್ದರಾಮಯ್ಯ

Update: 2019-10-12 13:14 GMT

ಬೆಂಗಳೂರು, ಅ. 12: ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತಿತ್ತು. ಆದರೆ, ಇಂದು ಯಡಿಯೂರಪ್ಪನವರಲ್ಲಿ ಗುಡುಗು-ಮಿಂಚು ಯಾವುದೇ ಇಲ್ಲ, ಅವರು ಮೆತ್ತಗಾಗಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿಎಸ್‌ವೈ ಕಾಲೆಳೆದರು.

ಶನಿವಾರ ವಿಧಾನಸಭೆಯಲ್ಲಿ ಅನುದಾನದ ಬೇಡಿಕೆಗಳ ಮೇಲೆ ಮಾತನಾಡಿದ ಅವರು, ಕೇಂದ್ರದಿಂದ ಉದ್ಯೋಗ ಖಾತ್ರಿ ಯೋಜನೆ ಬಾಕಿ ಹಣ ಬಿಡುಗಡೆಗೆ ಇಪ್ಪತ್ತೈದು ಮಂದಿ ಸಂಸದರು ಜಬರ್‌ದಸ್ತ್ ಮಾಡಬೇಕಿತ್ತು. ಆದರೆ, ಅದು ಆಗುತ್ತಿಲ್ಲ ಎಂದರು.

ಯಡಿಯೂರಪ್ಪನವರು ಕೇಂದ್ರ ಸರಕಾರದ ಮುಂದೆ ಜಬರ್‌ದಸ್ತ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಜಬರ್‌ದಸ್ತ್ ಆಗೇ ಇರುತ್ತಿದ್ದ ಯಡಿಯೂರಪ್ಪನವರು ಈಗ ಕಾಣಿಸುತ್ತಿಲ್ಲ. ನೀವೆಲ್ಲ ಸೇರಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮೆತ್ತಗೆ ಮಾಡಿದ್ದೀರಿ ಎಂದು ಆಡಳಿತ ಪಕ್ಷದ ಸದಸ್ಯರನ್ನು ಕೆಣಕಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ, ‘ಅದಕ್ಕೆ ನೀವೆಲ್ಲಿ ಸ್ವಾಮಿ ಬಿಡ್ತೀರಿ. ಅವರು ಮೊದಲಿನಂತೆಯೇ ಇದ್ದಾರೆ. ಹಣಕಾಸು ಮಸೂದೆ ಅನುಮೋದನೆಗೆ ಅವಕಾಶ ನೀಡದೆ ಅವರನ್ನು ಹಣ್ಣು ಮಾಡುತ್ತಿದ್ದೀರಿ ಎಂದು ವಾಗ್ಬಾಣ ಬಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಸಾಫ್ಟ್ ಆಗಿದೀನಿ, ಯಡಿಯೂರಪ್ಪ ಸಾಫ್ಟ್ ಆಗಬಾರದು. ಒಂದು ಕಾಲದಲ್ಲಿ ಎಲ್ಲರೂ ಹೇಳುತ್ತಿದ್ದರು. ಯಡಿಯೂರಪ್ಪ ಗುಡುಗು-ಮಿಂಚು ಅಂತ. ಆದರೆ, ಇದೀಗ ಅವರಲ್ಲಿ ಗುಡುಗು-ಮಿಂಚು ಯಾವುದು ಇಲ್ಲ ಎಂದರು.

‘ಗುಡುಗು ಇಲ್ಲ. ಆದರೆ, ಮಿಂಚು ಇದೆ’ ಎಂದು ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಬಸವರಾಜ ಬೊಮ್ಮಾಯಿ, ‘ನೀವು ಹೇಗಿದ್ದಿರಿ, ಸಿದ್ರಾಮಣ್ಣ ಮೊದಲು, ದಾಡಿ ಬಿಟ್ಟು ಫುಲ್ ರೆಬೆಲ್ ಆಗಿದ್ದಿರಲ್ಲ. ಕಾಂಗ್ರೆಸ್‌ಗೆ ಹೋದ ಮೇಲೆ ನಿಮ್ಮ ರೆಬೆಲ್ ಮನಸ್ಥಿತಿ ಕಾಣಿಸುತ್ತಿಲ್ಲ ಎಂದರು.

‘ರಾಜಕೀಯ ಬಹಳಷ್ಟು ಜನರನ್ನು ಮೆತ್ತಗೆ ಮಾಡುತ್ತದೆ. ಕೆಲ ಸಂದರ್ಭದಲ್ಲಿ ಹೀಗೆಲ್ಲ ಆಗುತ್ತದೆ’ ಎಂದು ಬೊಮ್ಮಾಯಿ ಹೇಳಿದರು. ‘ಏನೇ ಆಗಲಿ ನೀವು ಮೆತ್ತಗೆ ಆಗಿಲ್ಲವಲ್ಲ ಎಂಬ ನೋವು ನನ್ನದು ಬಸವರಾಜ್’ ಎಂದು ಸಿದ್ದರಾಮಯ್ಯ ಲೇವಡಿ ದಾಟಿಯಲ್ಲೆ ಚಟಾಕಿ ಹಾರಿಸಿದ್ದು ಸದನವನ್ನು ನಗೆ ಅಲೆಯಲ್ಲಿ ತೇಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News