ಕಳಸ: ಅ.21ಕ್ಕೆ ನಾಡಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ

Update: 2019-10-12 17:13 GMT

ಚಿಕ್ಕಮಗಳೂರು, ಅ.14: ಅತಿವೃಷ್ಟಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು, ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸುವುದು, ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸುವುದು, ರೈತರ ಕೃಷಿ ಜಮೀನುಗಳಿಗೆ ಸಾಗುವಳಿ ಚೀಟಿ ಕಲ್ಪಿಸುವಂತಹ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದು, ಈ ಬೇಡಿಕೆಗಳ ಈಡೇರಿಕೆಗಾಗಿ ಅ.21ರಂದು ಕಳಸ ಪಟ್ಟಣದ ನಾಡಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವುದಾಗಿ ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲ್ ಶೆಟ್ಟಿ ಎಚ್ಚರಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳಸ ಪಟ್ಟಣವನ್ನು ಇತ್ತೀಚೆಗೆ ತಾಲೂಕು ಕೇಂದ್ರ ಎಂದು ಘೋಷಿಸಲಾಗಿದ್ದು, ತಾಲೂಕು ಕೇಂದ್ರವಾಗಿರುವ ಕಳಸ ಪಟ್ಟಣದಲ್ಲಿ ಸುಸಜ್ಜಿತ ಸಾರ್ವಜನಿಕರ ಆಸ್ಪತ್ರೆ ಇದೆಯಾದರೂ ವೈದ್ಯರ ಕೊರತೆಯಿಂದಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಬಡವರ್ಗದ ಜನರು ಚಿಕಿತ್ಸೆಗಾಗಿ ದೂರದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರಿಗೆ ಹೋಗಬೇಕಾಗಿದೆ. ಈ ಭಾಗದಲ್ಲಿ ಕಾರ್ಮಿಕರೇ ಹೆಚ್ಚಾಗಿದ್ದು, ದುಪ್ಪಟ್ಟು ಹಣ ವ್ಯಯಿಸಿ ಬೇರೆಡೆ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪಟ್ಟಣದಲ್ಲಿರುವ ಆಸ್ಪತ್ರೆಗೆ ಶಾಶ್ವತ ವೈದ್ಯರನ್ನು ನೇಮಿಸಬೇಕೆಂದು ಹಲವು ಬಾರಿ ಜಿಲ್ಲಾಡಳಿತ ಹಾಗೂ ಜನಪ್ರತನಿಧಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿಕೆಯಲ್ಲಿ ಆರೋಪಿಸಿರುವ ಅವರು, ಕೂಡಲೇ ಕಳಸ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ. 

ಕಳಸ ತಾಲೂಕು ವ್ಯಾಪ್ತಿಯಲ್ಲಿ ಬಡವರ್ಗದ ಕೃಷಿಕರು ಜೀವನೋಪಾಯಕ್ಕಾಗಿ ಸರಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿದ್ದಾರೆ. ಇವುಗಳಿಗೆ ಹಕ್ಕುಪತ್ರ ಪಡೆಯುವ ನಿಟ್ಟಿನಲ್ಲಿ ಫಾರಂ ನಂ.50, 53, 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಜಿಲ್ಲಾಡಳಿತ, ಸರಕಾರ ಇಂತಹ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿರುವುದರಿಂದ ಬಡ ರೈತರಿಗೆ ಕೃಷಿ ಭೂಮಿ ಮಂಜೂರಾಗುತ್ತಿಲ್ಲ. ಅಲ್ಲದೇ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡಲೂ ಭೂಮಿ ಸಿಗದಂತಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಅಕ್ರಮ ಸಕ್ರಮ ಸಮಿತಿಗಳನ್ನು ನೇಮಿಸಿ ಸಾಗುವಳಿ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಅಲ್ಲದೇ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಅರಣ್ಯ ಇಲಾಖೆಗೆ ನೀಡಿರುವ ಜಮೀನು ಕಂದಾಯ ಜಮೀನೇ ಆಗಿದ್ದು, ಇದನ್ನು ಸರಕಾರ ಹಿಂಪಡೆದು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಬೇಕೆಂದು ಗೋಪಾಲ್‍ ಶೆಟ್ಟಿ ಒತ್ತಾಯಿಸಿದ್ದಾರೆ.

ಇನ್ನು ಮೂಡಿಗೆರೆ, ಕಳಸ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಭಾರೀ ಸಂಭವಿಸಿದ ಅತಿವೃಷ್ಟಿಗೆ ಸಾವಿರಾರು ಜನರು ಮನೆ, ಕೃಷಿ ಜಮೀನು ಕಳೆದುಕೊಂಡು ಅತಂತ್ರರಾಗಿದ್ದಾರೆ. ಸರಕಾರ ಸಂತ್ರಸ್ತರಾದ ಕುಟುಂಬಗಳಿಗೆ ತಾತ್ಕಾಲಿಕ ನೆರವು ನೀಡಿ, ಗಂಜಿ ಕೇಂದ್ರಗಳಲ್ಲಿ ಆಶ್ರಯ ನೀಡಿದ್ದನ್ನು ಬಿಟ್ಟರೇ ಯಾವುದೇ ಪರಿಹಾರಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸರಕಾರ ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ಪರಿಹಾರ ಧನ ಘೋಷಣೆ ಮಾಡಿದೆ. ಆದರೆ ಈ ಪರಿಹಾರ ಧನ ಸಂತ್ರಸ್ತರಿಗೆ ಯಾವ ಪ್ರಯೋಜನಕ್ಕೂ ಬಾರದಿರುವುದರಿಂದ ಈ ಪರಿಹಾರದ ಮೊತ್ತವನ್ನು 25 ಸಾವಿರ ರೂ. ಗೆ ಹೆಚ್ಚಿಸಬೇಕೆಂದಿರುವ ಅವರು, ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರಧನದೊಂದಿಗೆ ಬಾಡಿಗೆ ಮನೆಯಲ್ಲಿರಲು 5 ಸಾವಿರ ಬಾಡಿಗೆ ನೀಡುವುದಾಗಿ ಘೋಷಿಸಿದ್ದು, ಬಾಡಿಗೆ ಹಣ ಸೇರಿದಂತೆ ಈ ಪರಿಹಾರಧನ ಇನ್ನೂ ಸಂತ್ರಸ್ತರಿಗೆ ದೊರಕದಿರುವುದರಿಂದ ನೂರಾರು ಸಂತ್ರಸ್ತರು ಇನ್ನೂ ಬಿದರಹಳ್ಳಿಯ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದ್ದರಿಂದ ಸರಕಾರ ಮತ್ತು ಜಿಲ್ಲಾಡಳಿತ ಮನೆ, ಜಮೀನು ಕಳೆದುಕೊಂಡವರಿಗೆ ಪರ್ಯಾಯ ಜಮೀನು ನೀಡಿ ಮನೆ ನಿರ್ಮಿಸಿಕೊಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಮಲೆನಾಡಿನಲ್ಲಿ ಬಿಪಿಎಲ್ ಕಾರ್ಡ್‍ದಾರರ ಕುಟುಂಬಕ್ಕೆ ಬಿಜೆಪಿ ಸರಕಾರ 3 ಕೆಜಿ ಅಕ್ಕಿ, 4 ಕೆಜಿ ರಾಗಿ ನೀಡುತ್ತಿರುವುದು ಸರಿಯಲ್ಲ. ಮಲೆನಾಡಿನ ಜನರು ರಾಗಿಯನ್ನು ಬಳಸುವುದಿಲ್ಲ, ಕೂಡಲೇ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ವಿತರಣೆ ಮಾಡುವುದನ್ನು ನಿಲ್ಲಿಸಿ ಬದಲಿಗೆ ಅಕ್ಕಿಯನ್ನೇ ನೀಡುವುದರೊಂದಿಗೆ ಅಲ್ಲದೇ ಬಯೋಮೆಟ್ರಿಕ್ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರುವ ಅವರು, ಕಳಸ ಸಮೀಪದ ಕಲ್ಮಕ್ಕಿ ಗ್ರಾಮದಲ್ಲಿ ಕುದುರೆಮುಖ ದಿನಗೂಲಿ ನೌಕರರಿಗೆ ನಿವೇಶನ ನೀಡಲು ಮೀಸಲಿಟ್ಟಿರುವ ಜಾಗವನ್ನು ಶೀಘ್ರ ನೌಕರರಿಗೆ ಹಂಚಿಕೆ ಮಾಡಿ, ಉಳಿದ ಜಾಗವನ್ನು ಸ್ಥಳೀಯರಿಗೆ ಹಂಚಿಕೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News