ಮುಸ್ಲಿಮರಿಗೆ ಆಸ್ತಿ ಮಾರಾಟ ರದ್ದುಗೊಳಿಸಿದ ಗುಜರಾತ್ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Update: 2019-10-16 16:50 GMT

ಗಾಂಧೀನಗರ, ಅ.16: ಮುಸ್ಲಿಮರಿಗೆ ಮಾರಾಟ ಮಾಡಲಾಗಿದ್ದ 15 ಆಸ್ತಿಗಳ ನೋಂದಣಿಯನ್ನು ಗುಜರಾತ್ ಸರಕಾರ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಮಾನ್ಯ ಮಾಡಿರುವ ಗುಜರಾತ್ ಹೈಕೋರ್ಟ್, ಸರಕಾರದ ಆದೇಶವನ್ನು ರದ್ದುಗೊಳಿಸಿದೆ.

ಆದರೆ ಮಾರಿದವರಿಗೆ ಅಥವಾ ಖರೀದಿಸಿದವರಿಗೆ ಯಾವುದೇ ನೋಟಿಸ್ ಜಾರಿಗೊಳಿಸದೆ ಸರಕಾರ ಕ್ರಮ ಕೈಗೊಂಡಿದೆ.

  ವಡೋದರದ ಹೊರವಲಯದ ತಂಡಲ್‌ಜ ಪ್ರದೇಶದಲ್ಲಿರುವ 2 ಆಸ್ತಿ, ಅಹ್ಮದಾಬಾದ್‌ನ ವರ್ಷಾ ಫ್ಲ್ಯಾಟ್‌ನಲ್ಲಿರುವ 13 ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವಡೋದರದ ಆಸ್ತಿ ಮಾರಾಟ ಪ್ರಕರಣದಲ್ಲಿ ಹಿಂದು ಕುಟುಂಬದವರು ದೂರು ಸಲ್ಲಿಸಿದ್ದರೆ, ಅಹ್ಮದಾಬಾದ್‌ನಲ್ಲಿರುವ ಆಸ್ತಿ ಮಾರಾಟ ಪ್ರಕರಣದಲ್ಲಿ ಹಿಂದು ಜಾಗರಣ ಮಂಚ್‌ನ ಕಾರ್ಯಕರ್ತರು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಗುಜರಾತ್ ಸರಕಾರ ಆಸ್ತಿಗಳ ನೋಂದಣಿಯನ್ನು ರದ್ದುಗೊಳಿಸಿದೆ. ಈ ಎಲ್ಲಾ ಆಸ್ತಿಗಳೂ ಹಿಂದು ಕುಟುಂಬಗಳಿಗೆ ಸೇರಿದ್ದಾಗಿದೆ.

ಕ್ಷೋಭೆಗೊಳಗಾದ ಪ್ರದೇಶ ಕಾಯ್ದೆ ಎಂದು ಸಂಕ್ಷಿಪ್ತವಾಗಿ ಕರೆಯಲಾಗುವ ಕಾಯ್ದೆಯನುಸಾರ ಸರಕಾರ ಈ ಕ್ರಮ ಕೈಗೊಂಡಿದೆ. ಆಗಿಂದಾಗ್ಗೆ ನಡೆಯುವ ಕೋಮು ಗಲಭೆಯಿಂದ ಆತಂಕಗೊಂಡು ಸ್ಥಿರಾಸ್ತಿಗಳನ್ನು ಮಾರಾಟ ಮಾಡುವುದನ್ನು ತಡೆಯುವ ಉದ್ದೇಶದ ಈ ಕಾನೂನನ್ನು 1991ರಲ್ಲಿ ಜಾರಿಗೊಳಿಸಲಾಗಿದೆ. ಬಳಿಕ ಇದಕ್ಕೆ ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಕಾಯ್ದೆಯ ಪ್ರಕಾರ, ಕ್ಷೋಭೆಗೊಳಗಾದ ಪ್ರದೇಶದಲ್ಲಿ ಯಾವುದೇ ಆಸ್ತಿಯ ಮಾರಾಟ, ಖರೀದಿಗೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿಯ ಸ್ಥಾನದಲ್ಲಿ ನಿಯೋಜಿವಾಗಿರುವ ಅಧಿಕಾರಿಯ ಅನುಮತಿ ಅಗತ್ಯವಿದೆ. ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ 1000 ರೂ.ದಂಡ ಅಥವಾ 6 ತಿಂಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ.

  ಮುಂಬೈ ಮೂಲದ ಯೂನುಸ್ ಹಾಗೂ ಅವರ ಪತ್ನಿ ಝೀನತ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆದು ತಂಡಲ್‌ಜ ಪ್ರದೇಶದಲ್ಲಿರುವ ಎರಡು ಬಂಗಲೆಗಳನ್ನು ಖರೀದಿಸಿದ್ದರು. ಅನುಮತಿ ನೀಡುವ ಮುನ್ನ ಎರಡು ಬಾರಿ ತನಿಖೆ ನಡೆಸಲಾಗಿದ್ದು 2019ರ ಆಗಸ್ಟ್ 8ರಂದು ಮಾರಾಟ ಪತ್ರ ಕಾರ್ಯಗತಗೊಳಿಸಲಾಗಿದೆ.

ಆದರೆ ಮಾರಾಟವಾದ ಆಸ್ತಿಯ ಪಕ್ಕದ ಹಿಂದುಗಳು ಇದಕ್ಕೆ ವಿರೋಧ ಸೂಚಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ಜಿಲ್ಲಾಧಿಕಾರಿ ಮತ್ತೊಮ್ಮೆ ತನಿಖೆಗೆ ಸೂಚಿಸಿದ್ದರು. ಅಚ್ಚರಿಯ ಕ್ರಮವಾಗಿ, ಹೊಸದಾಗಿ ನಡೆಸಿದ ಪೊಲೀಸ್ ತನಿಖೆಯ ವರದಿಯಲ್ಲಿ- ಮುಸ್ಲಿಮರು ಮಾತ್ರ ಖರೀದಿಸಿರುವ ಕಾರಣ , ಭವಿಷ್ಯದಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

ತನಿಖಾ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಹಿಂದು ಕುಟುಂಬಗಳು ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, 2019ರ ಸೆಪ್ಟೆಂಬರ್ 9ರಂದು ಮಾರಾಟ ಪತ್ರ ಮತ್ತು ನೋಂದಣಿಯನ್ನು ಅಮಾನತುಗೊಳಿಸಲಾಗಿದ್ದು ಸರಕಾರದ ಎಲ್ಲಾ ದಾಖಲೆಗಳಲ್ಲೂ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಬೇಕೆಂದು ಸೂಚಿಸಲಾಗಿದೆ.

   ಪಾಲ್ದಿ ಎಂಬಲ್ಲಿರುವ ವರ್ಷಾ ಫ್ಲಾಟ್‌ನ ಪ್ರಕರಣದಲ್ಲಿ, 24 ಫ್ಲಾಟ್ ಇದ್ದ ಕಟ್ಟಡ ಶಿಥಿಲವಾಗಿದ್ದ ಕಾರಣ ಆ ಕಟ್ಟಡವನ್ನು ಬಿಲ್ಡರ್ ಒಬ್ಬರು ಮರು ನಿರ್ಮಾಣ ಮಾಡಿ, ಮತ್ತೆ 32 ಫ್ಲಾಟ್‌ಗಳನ್ನು ಸೇರಿಸಲಾಗಿದೆ. ಕಟ್ಟಡದ ಮಾಲಕರಿಗೆ ಹಣದ ಬದಲು 24 ಫ್ಲಾಟ್‌ಗಳ ಮಾಲಕತ್ವವನ್ನು ಉಚಿತವಾಗಿ ನೀಡಿದ್ದರೆ, ಹೆಚ್ಚುವರಿ ನಿರ್ಮಿಸಿರುವ 32 ಫ್ಲಾಟ್‌ಗಳ ಮಾಲಕತ್ವ ಬಿಲ್ಡರ್‌ಗೆ ಸಂದಿದೆ. ಇದರಲ್ಲಿ 13 ಫ್ಲಾಟ್‌ಗಳನ್ನು ಕ್ಷೋಭೆಗೊಳಗಾದ ಪ್ರದೇಶ ಕಾಯ್ದೆಯಡಿ ಅನುಮತಿ ಪಡೆದು ಮುಸ್ಲಿಮರಿಗೆ ಮಾರಲಾಗಿದೆ.

 ಆದರೆ ಹಿಂದು ಜಾಗರಣ ಮಂಚ್‌ನ ಕಾರ್ಯಕರ್ತರು ನೀಡಿರುವ ದೂರಿನನ್ವಯ ಈ ನೋಂದಣಿಯನ್ನೂ ಸರಕಾರ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಖರೀದಿಗಾರರು ಗುಜರಾತ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News