ತಜ್ಞರನ್ನು ನೇಮಿಸದಿದ್ದರೆ ಅಧಿಕಾರಿಗಳು ಜೈಲಿಗೆ: ಹೈಕೋರ್ಟ್

Update: 2019-10-17 14:55 GMT

ಬೆಂಗಳೂರು, ಅ.17: ರಾಜ್ಯದಲ್ಲಿ ಹೆಚ್ಚಿರುವ ಅಪೌಷ್ಟಿಕತೆಯಿಂದ ಪ್ರಸವದ ವೇಳೆ ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಎರಡು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಸೂತಿ ತಜ್ಞ, ಮಕ್ಕಳ ತಜ್ಞರನ್ನು ಎರಡು ತಿಂಗಳಲ್ಲಿ ನೇಮಕ ಮಾಡಬೇಕು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

 ಕಾನೂನು ಸೇವಾ ಪ್ರಾಧಿಕಾರದ ಪರ ವಾದಿಸಿದ ವಕೀಲೆ ನಳೀನಾ ಮಾಯಗೌಡ ಅವರು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಸೂತಿ ತಜ್ಞ, ಮಕ್ಕಳ ತಜ್ಞರ ನೇಮಕವಾಗಿಲ್ಲ. ಹೀಗಾಗಿ, ಪ್ರತಿ ನಿತ್ಯ ಇಬ್ಬರು ಗರ್ಭಿಣಿಯರು ಸಾವನ್ನಪ್ಪಿದ್ದಾರೆ. 16 ತಿಂಗಳ ಅವಧಿಯಲ್ಲಿ 96 ತಾಯಂದಿರು ಸಾವನ್ನಪ್ಪಿದ್ದಾರೆ. ಹಲವು ಕಡೆ ಆ್ಯಂಬುಲೆನ್ಸ್ ಇಲ್ಲ. ರಕ್ತ ನಿಧಿಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ಮಾಡಿಸಲು ವ್ಯವಸ್ಥೆ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರಸೂತಿ ತಜ್ಞ, ಮಕ್ಕಳ ತಜ್ಞರ ನೇಮಕದ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಅಲ್ಲದೆ, ಎರಡು ತಿಂಗಳಲ್ಲಿ ತಜ್ಞರ ಹುದ್ದೆಗಳನ್ನು ನೇಮಿಸುವುದಾಗಿ ಹೇಳಿರುವುದು ಅರ್ಥಹೀನವಾಗಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿತು.

 ಎರಡು ತಿಂಗಳಲ್ಲಿ ಪ್ರಸೂತಿ ತಜ್ಞರನ್ನು ನೇಮಿಸುತ್ತೇವೆ ಎಂದು ಹೇಳುತ್ತಿದ್ದೀರಿ. ಹಾಗೊಂದು ಬಾರಿ ನೀವು ಎರಡು ತಿಂಗಳಲ್ಲಿ ನೇಮಿಸದಿದ್ದರೆ ಅಧಿಕಾರಿಯನ್ನು ನಾವು ಜೈಲಿಗೆ ಕಳುಹಿಸುತ್ತೇವೆ. ಅದರ ಜೊತೆಗೆ ಖಾಲಿ ಹುದ್ದೆಗಳ ನೇಮಕಾತಿಗೆ ಗಡುವು ನೀಡುತ್ತೇವೆ ಎಂದು ಸೂಚಿಸಿ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News