ಸ್ಥಿರಾಸ್ತಿನೋಂದಣಿಗೆ ಪಿಆರ್ ಕಾರ್ಡ್ ಕಡ್ಡಾಯ ನಿನಿಯಮದಲ್ಲಿ ವಿನಾಯಿತಿ

Update: 2019-10-17 18:19 GMT

ಶಿವಮೊಗ್ಗ, ಅ. 17: ನಗರದಲ್ಲಿ ಸ್ಥಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ (ಪಿಆರ್) ಕಡ್ಡಾಯ ಆದೇಶದಿಂದ ವಿನಾಯಿತಿ ಕಲ್ಪಿಸುವ ಅಧಿಕೃತ ಆದೇಶ ಕೊನೆಗೂ ಹೊರಬಿದ್ದಿದೆ.

ರಾಜ್ಯ ಸರಕಾರದ ಅಧಿಸೂಚನೆ ಅನುಸಾರ, ನೋಂದಣಿ ಮಹಾ ಪರಿವೀಕ್ಷಕರು-ಮುದ್ರಾಂಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಪಿಆರ್ ಕಾರ್ಡ್ ಕಡ್ಡಾಯದಿಂದ ವಿನಾಯಿತಿ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಪಪಡಿಸಲಾಗಿದೆ.

ಆಯುಕ್ತರ ಸೂಚನಾ ಪತ್ರವು ಈಗಾಗಲೇ ಶಿವಮೊಗ್ಗ ನೋಂದಣಿ ಇಲಾಖೆಗೆ ತಲುಪಿದೆ. ಅದರಂತೆ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಪಿಆರ್ ಕಾರ್ಡ್ ಇಲ್ಲದ ಸ್ಥಿರಾಸ್ತಿಗಳನ್ನು ಕೂಡ ನೋಂದಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಶಿವಮೊಗ್ಗ ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ, ಪಿಆರ್ ಕಾರ್ಡ್ ಹೊಂದಿರುವ ಸ್ಥಿರಾಸ್ತಿಗಳನ್ನು ಮಾತ್ರ ನೋಂದಾಯಿಸಲಾಗುತ್ತಿತ್ತು. ಪಿಆರ್ ಕಾರ್ಡ್ ಕಡ್ಡಾಯ ಆದೇಶದಿಂದ ವಿನಾಯಿತಿ ಕಲ್ಪಿಸಲಾಗಿದೆ. ಅದರಂತೆ, ಪಿಆರ್ ಕಾರ್ಡ್ ಇಲ್ಲದ ಸ್ಥಿರಾಸ್ತಿಗಳನ್ನು ಕೂಡ ನೋಂದಾಯಿಸಲಾಗುತ್ತಿದೆ’ ಎಂದು ಸಬ್ ರಿಜಿಸ್ಟ್ರಾರ್ ಪ್ರಸನ್ನ ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ಗೊಂದಲ: ಪಿಆರ್ ಕಾರ್ಡ್ ಕಡ್ಡಾಯ ಆದೇಶದಿಂದ ವಿನಾಯಿತಿ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲ ಉಂಟಾಗಿತ್ತು. ರಾಜ್ಯ ಸರಕಾರ ವಿನಾಯಿತಿ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದರು. ಇದರ ಹೊರತಾಗಿತೂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಸ್ಥಿರಾಸ್ತಿಗಳ ಕಾರ್ಡ್ ರಹಿತ ನೋಂದಣಿ ನಡೆಯುತ್ತಿರಲಿಲ್ಲ.

ಈ ನಡುವೆ, ಸೆಪ್ಟೆಂಬರ್ 30 ರಂದು ನಗರದ ಡಿ.ಎ.ಆರ್. ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಿಆರ್ ಕಾರ್ಡ್ ಕಡ್ಡಾಯ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದಿದ್ದರು. ಅದೇ ದಿನದಂದು, ಕಂದಾಯ ಇಲಾಖೆ ಸರಕಾರದ ಜಂಟಿ ಕಾರ್ಯದರ್ಶಿಗಳು ವಿನಾಯಿತಿ ಬಗ್ಗೆ ತಿಳಿಸಿದ್ದರು.

ಇದೆಲ್ಲದರ ಹೊರತಾಗಿಯೂ, ಪಿಆರ್ ಕಾರ್ಡ್ ಇಲ್ಲದೇ ಸ್ಥಿರಾಸ್ತಿಗಳ ನೋಂದಣಿಯಾಗುತ್ತಿರಲಿಲ್ಲ. ಈ ಬಗ್ಗೆ ಸ್ಥಳೀಯ ಸ್ಥಿರಾಸ್ತಿ ಮಾಲಕರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಇದೀಗ ರಾಜ್ಯ ಸರಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸ್ಥಿರಾಸ್ತಿ ನೋಂದಣಿಗೆ ಪಿಆರ್ ಕಾರ್ಡ್ ಅಗತ್ಯವಿಲ್ಲವಾಗಿದೆ. ಈ ಹಿಂದಿನ ವ್ಯವಸ್ಥೆಯೇ ಅನುಷ್ಠಾನಕ್ಕೆ ಬಂದಿದೆ.

‘ಪಿಆರ್ ರಹಿತ ಸ್ಥಿರಾಸ್ತಿ ನೋಂದಣಿಗೆ ಚಾಲನೆ’

 ಸ್ಥಿರಾಸ್ತಿ ನೊಂದಣಿ ವೇಳೆ, ಪಿಆರ್ ಕಾರ್ಡ್ ಕಡ್ಡಾಯ ಆದೇಶಕ್ಕೆ ವಿನಾಯಿತಿ ಕಲ್ಪಿಸಲಾಗಿದೆ. ಈ ಕುರಿತಂತೆ ಅಧಿಕೃತ ಆದೇಶವೂ ಹೊರಬಿದ್ದಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಗುರುವಾರದಿಂದ ಪಿ.ಆರ್.ಕಾರ್ಡ್ ಇಲ್ಲದ ಸ್ಥಿರಾಸ್ತಿಗಳ ನೋಂದಾಯಿಸಲಾಗುತ್ತಿದೆ ಎಂದು ಸಬ್ ರಿಜಿಸ್ಟಾರ್ ಕಚೇರಿಯ ಉಪ ನೋಂದಣಾಧಿಕಾರಿ ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಏನಿದು ಯುಪಿಒಆರ್ ಯೋಜನೆ?

ಸ್ಥಿರಾಸ್ತಿ ನೋಂದಣಿ ವೇಳೆ ಅಕ್ರಮ ತಡೆಗಟ್ಟಲು ಹಾಗೂ ಸರಕಾರಿ-ಖಾಸಗಿ ಜಾಗಗಳನ್ನು ವೈಜ್ಞಾನಿಕವಾಗಿ ಸರ್ವೇ ನಡೆಸಿ ಮತ್ತು ಪ್ರತ್ಯೇಕ ಸಂಖ್ಯೆ ನೀಡುವ ಉಪಗ್ರಹ ಆಧಾರಿತ ಸ್ಥಿರಾಸ್ತಿ ಮಾಲಕತ್ವ (ಯುಪಿಒಆರ್) ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ನೀಡಲಾಗುವ ಪಿಆರ್ ಕಾರ್ಡ್ ಹೊಂದಿದ ಸ್ಥಿರಾಸ್ತಿಯನ್ನು ಮಾತ್ರ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.

ಇದಕ್ಕಾಗಿ ನಗರದ ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿ ಪ್ರತ್ಯೇಕ ಕಚೇರಿ ತೆರೆಯಲಾಗಿತ್ತು. ಪ್ರತ್ಯೇಕ ಅಧಿಕಾರಿ-ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಕಚೇರಿಯು ಸರ್ವೇ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ಸ್ಥಿರಾಸ್ತಿಗಳಿಗೆ ಅಗತ್ಯ ದಾಖಲಾತಿಯಿಲ್ಲದಿದ್ದರೆ ಹಾಗೂ ರೆವಿನ್ಯೂ ಪ್ರದೇಶದ ನಿವೇಶನ-ಮನೆಗೆ ಪಿಆರ್.ಕಾರ್ಡ್ ನೀಡುತ್ತಿರಲಿಲ್ಲ. ಇದರಿಂದ ಕೆಲ ಸಂಘಟನೆಗಳು, ಸ್ಥಿರಾಸ್ತಿ ಮಾಲಕರು ಕಾರ್ಡ್ ಕಡ್ಡಾಯ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News