ಕಣ್ಣಂಚಿನ ಬೆಳಕಿಗೆ ಹಿಡಿದ ಕನ್ನಡಿ

Update: 2019-10-17 18:31 GMT

ಡಾ. ಸತ್ಯಮಂಗಲ ಮಹಾದೇವ

       ನಾನೂ ನೀನೂ ಒಳಗ ಕೂಡಿ

       ಪ್ರೀತಿ ಹಾಂಗ ಹೊರಮೂಡಿ

       ಹೂವಾಗಿ ಬರಬೇಕು ಬಣ್ಣಾ ಬಣ್ಣಾ

       ಆವಾಗ ತೆರಿತಾವ ಒಳಗಾನ ಕಣ್ಣ !

                 ದ.ರಾ.ಬೇಂದ್ರೆ.

ಕವಿತೆ ಎಂದರೆ ಏನು? ಎನ್ನುವ ಪ್ರಶ್ನೆ ಕಾಲಾನು ಕಾಲದಿಂದ ಎಲ್ಲರೊಳಗೂ ಹರಿದು ಬಂದಿರುವ ಒಂದು ವಿಶಿಷ್ಟ ಬೆರಗು. ಕವಿತೆ ಎಂದರೇನು ಎನ್ನುವ ಪ್ರಶ್ನೆಯೆ ಕಾವ್ಯದ, ಭಾವಲೋಕದ ಪ್ರವೇಶಕ್ಕೆ ಕೀಲಿಕೈ. ಬೇಂದ್ರೆಯವರ ಮೇಲ್ಕಂಡ ಕವಿತೆಯ ಸಾಲುಗಳು ನಾನು-ನೀನು ಒಳಗೆ ಕೂಡಬೇಕಿದೆ ಎನ್ನುವ ಮಾತಿದೆಯಲ್ಲಾ, ಇದು ಕವಿಯು ಕಾಣಬೇಕಾದ ಮೊದಲ ದರ್ಶನ. ಹೊರ ಪ್ರಪಂಚದ ಅನುಭವಗಳನ್ನು ಕಂಡ ಕವಿ ಪ್ರತಿಕ್ರಿಯಿಸುವುದು ಸಾಮಾನ್ಯ ಕ್ರಿಯೆ. ಈ ಹೊರ ಪ್ರಪಂಚವನ್ನು ಬಿಡಿಸಿಕೊಂಡು ಅಂತರಂಗದ ದರ್ಶನ ಮಾಡಿದಾಗ ಭಾವ ಕುಸುಮಗಳು ಬಣ್ಣ ಬಣ್ಣದ ಜೀವಚೈತನ್ಯದ ಪರವಶತೆಯನ್ನು ಪಡೆದುಕೊಳ್ಳುತ್ತವೆ. ಆಗ ಈ ಒಳಗಣ್ಣು ತೆರೆಯುತ್ತದೆ. ಒಳಗಣ್ಣನ್ನು ತೆರೆಸುವ ಕೀಲಿ ಕೈ ಬದುಕು ಎಂದು ಬೇಂದ್ರೆ ಸಾರಿದ್ದಾರೆ. ಸಹಜ ಬದುಕಿನ ಆನಂದ, ಜೀವಪ್ರೀತಿ, ಆಡಂಬರಗಳಿಲ್ಲದ ಸಹಚರ್ಯ ಇವುಗಳು ಒಳಗಣ್ಣನ್ನು ತೆರೆಸುತ್ತವೆ ಎಂಬುದು ಕಾವ್ಯವು ಹೇಳುವ ಸತ್ಯ.

ಮನುಷ್ಯ ಇಂದು ಯಂತ್ರನಾಗರಿಕತೆಯ ಬಿಡುವಿಲ್ಲದ ಓಟದಲ್ಲಿ ಓಡುತ್ತಾ, ಗುರಿ ಯಾವುದು ಎಂಬುದನ್ನು ನಿರ್ಧರಿಸಲಾಗದಷ್ಟು ಬಿಡುವಿಲ್ಲದ ಈ ಕಾಲದಲ್ಲಿ ಸಂವೇದನೆಗಳು ಮಾಯವಾಗಿ ‘ಹಣ’ ಅವುಗಳ ಜಾಗವನ್ನು ಆಕ್ರಮಿಸಿಕೊಂಡಿದೆ. ಎಲ್ಲ ಅಕೃತ್ಯಗಳಿಗೂ ‘ಪರಿಹಾರ’ ಎಂಬ ಮಾತನ್ನು ಬಳಸುತ್ತಾ ಆ ಪರಿಹಾರ ‘ಹಣ’ ಎಂಬ ಸ್ಥಿತಿಗೆ ಬಂದಿದ್ದೇವೆ. ಈ ಯಂತ್ರಮಾನವನ ಯಾಂತ್ರಿಕ ಬದುಕನ್ನು ಸಂವೇದನೆಗೊಳಪಡಿಸುವ ಜವಾಬ್ದಾರಿ ಕವಿಯ ಮೇಲಿದೆ. ಕಲಾವಿದ, ಸಾಹಿತಿ, ಕವಿ ‘ಅನೌಪಚಾರಿಕ ಮನೋವಿಜ್ಞಾನಿ’ ಗಳೆಂದು ಖ್ಯಾತ ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡಾ ಅಭಿಪ್ರಾಯ ಪಟ್ಟಿದ್ದಾರೆ. ಕವಿ ಹೇಗೆ ಮನೋ ವಿಜ್ಞಾನಿ ಆಗುತ್ತಾನೆಂಬ ಪ್ರಶ್ನೆ ಉದ್ಭವಿಸಬಹುದು. ಇತರರು ತಮ್ಮ ಮನೋವೇದನೆಗಳಿಗೆ ಚಟಗಳ ದಾಸರಾಗಿ ಜಗಳ ಮನೋಕ್ಲೇಶಗಳನ್ನು ತಂದುಕೊಂಡರೆ ಕವಿ ತನ್ನ ಭಾವನೆಗಳನ್ನು ಕಾವ್ಯ, ಚಿತ್ರ, ಕಲಾತ್ಮಕ ಅಭಿವ್ಯಕ್ತಿಯಲ್ಲಿ ವಿರೇಚನಗೊಳಿಸುತ್ತಾನೆ. ಈ ಭಾವ ನಿರ್ಭರತೆಯನ್ನು ತಾನು ಅನುಭವಿಸಿ, ಮನಸ್ಸಿನ ತೊಳಲಾಟವನ್ನು ನೀಗಿಸಿಕೊಳ್ಳುತ್ತಾನೆ. ಮನೋವಿಜ್ಞಾನಿಯೂ ಸಹ ಮನೋರೋಗಿಗಳಿಗೆ ಆಪ್ತಸಮಾಲೋಚನೆಯ ಮೂಲಕವೇ ಪರಿಹಾರ ನೀಡುತ್ತಾನೆ. ಈ ಭಾಷಾ ಕಲಾ ಮಾಧ್ಯಮಗಳು ಸಮಾಜವನ್ನು ಸದಾ ಸೋಸುವ ಶೋಧಕಗಳಾಗಿವೆ.

ಕವಿ ಬರೆಯುವುದರಿಂದ ಸಮಾಜದ ಬದಲಾವಣೆ ಆಗಿದೆಯೇ ಎಂದರೆ ಸಾಹಿತ್ಯ ಕಲೆಗಳನ್ನು ತಕ್ಕಡಿಯಲ್ಲಿ ತೂಗಿ ಅಳೆಯಲು ಬರುವುದಿಲ್ಲ. ಅದು ಸಮಾಜದ ಒಟ್ಟು ಸಾಂಸ್ಕೃತಿಕ, ಮಾನಸಿಕ ವಿವೇಕವನ್ನು ತೋರಿಸುವ ಕನ್ನಡಿಯಾಗಿ ಕೆಲಸ ಮಾಡುತ್ತಿರುತ್ತದೆ. ಆದ್ದರಿಂದ ಕವಿ ಎನ್ನುವ ಪದ ಅದು ಪದವಿಯಲ್ಲ, ಪರಿಚಾರಿಕೆಯ ಪದ ಅಷ್ಟೆ.

ಕನ್ನಡದ ಹೊಸ ತಲೆಮಾರಿನ ಕಾವ್ಯ ರಚನೆಯಲ್ಲಿ ಹೆಚ್ಚು ಜನ ಕವಿಗಳು ಬರೆಯುತ್ತಿದ್ದಾರೆ ಇದು ಸಂತೋಷದ ವಿಷಯ. ಕುವೆಂಪು ಕವಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ‘ಅಯತ್ನ ಕವಿ’ ‘ಪ್ರಯತ್ನ ಕವಿ’ ಎಂದು ವಿವರಿಸಿದ್ದಾರೆ. ಆದರೆ ಒಂದು ಕವನ ಸಂಕಲನ ಬರೆದು ಕೊನೆಮುಟ್ಟದ ಮುಟ್ಟುತ್ತಿರುವವರ ನಡುವೆ ಪ್ರಯತ್ನಿಸಿ ‘ಹುಟ್ಟುಪಾಡನ್ನು ಹಾಡಾಗಿಸುವ’ ಪ್ರಯತ್ನ ಕವಿಗಳು ಲೋಕದ ಲೋಲಕದಲ್ಲಿ ಧ್ವನಿಯಾಗಿ ಸೇರಿಹೋಗಿದ್ದಾರೆ. ಲೋಕದಲ್ಲಿ ಇದ್ದು ಲೋಕವನ್ನು ಬೆಳಗಿಸಿ ತಾವೂ ಬೆಳಗುತ್ತಿದ್ದಾರೆ. ಇಂತಹ ಪ್ರಯತ್ನಶೀಲ ಪ್ರಯೋಗಶೀಲ ಕವಿಗಳ ಸಾಲಿನಲ್ಲಿ ತಮ್ಮದೇ ವಿಶಿಷ್ಟ ಶೈಲಿಯನ್ನು ಗುರುತಿಸಿಕೊಂಡ ಪ್ರಮುಖರು ನಮ್ಮ ಪ್ರೀತಿಯ ಸೋದರ ಕವಿ ‘ದೇವರಾಜ್ ನಿಸರ್ಗತನಯ’ ಅವರು.

ಇವರ ಈ ಸಂಕಲನ ‘ಕಣ್ಣಂಚಿನ ಬೆಳಕು’ ಓದುಗರ ನಿರೀಕ್ಷೆ ತಣಿಸುತ್ತದೆ ಎಂದು ಭಾವಿಸಿದ್ದೇನೆ. ಇವರ ಕವಿತೆಗಳಲ್ಲಿ ಪ್ರಮುಖವಾಗಿ ಪರಿಸರ ಕಾಳಜಿ, ನಾಡು ನುಡಿ, ಭಾಷಾಭಿಮಾನ, ರೈತರು, ಸೈನಿಕರು, ರಾಜಕೀಯ ವಿಡಂಬನೆ, ಸರಳತೆ, ಮೌಢ್ಯಗಳ ವಿರೋಧಿ, ಸ್ತ್ರೀ ಶೋಷಣೆಯ ವಿರುದ್ಧದ ಧ್ವನಿ ಹಾಗೂ ಮಾನವೀಯ ಮೌಲ್ಯಗಳತ್ತ ಚಿತ್ತ ಹರಿಸಿರುವುದನ್ನು ಗಮನಿಸಬಹುದು.

‘‘ಈ ಮಾಗಿಯ ಕೊರೆವ ಚಳಿಯ ಮುಖದಲೂ ಬೆವರ ಹನಿಗಳು’’

ಎಂಬ ಸಾಲುಗಳು ಕಾವ್ಯದ ಸೂಕ್ಷ್ಮತೆಯನ್ನು ತೋರಿಸುತ್ತವೆ. ಇಂದಿನ ವಾಸ್ತವ ಸ್ಥಿತಿಯನ್ನು ಪ್ರಶ್ನೆ ಮಾಡುತ್ತಲೇ ಕವಿತೆ ವಾಸ್ತವ ಕಟು ಸತ್ಯವನ್ನು ಅನಾವರಣಗೊಳಿಸುತ್ತದೆ.

‘‘ಕನಸ ಕಾಣಬಹುದೆ ನಾವು?’’ ಎಂಬ ಕವಿತೆಯಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳ ಚೇಷ್ಟೆಗಳಲ್ಲಿ ರಾಜಕಾರಣಿಗಳ ಅದ್ವಾನ ರಾಜಕಾರಣದಲ್ಲಿ ಸಕಲ ಸಂಕಷ್ಟಗಳಿಂದ ಹೊರಬರುವ ಕನಸು ಕಾಣುತ್ತಿರುವ ನಾವು ಭ್ರಷ್ಟಾಚಾರ, ಜಾತಿ ಸಂಘರ್ಷಗಳಿಂದ ಹೊರಬರುವ ಬಿಡುಗಡೆಯ ಕನಸು ಕಾಣಬಹುದೆ ಎಂಬ ಕವಿಯ ಪ್ರಶ್ನೆ ಎಲ್ಲರ ಪ್ರಶ್ನೆಯಾಗುವಲ್ಲಿ ಕವಿತೆ ಗೆಲ್ಲುತ್ತದೆ. ‘‘ಕವಿ ಸೋಲಬೇಕು ಕವಿತೆ ಗೆಲ್ಲಬೇಕು’’ ಎನ್ನುವ ಮಾತೊಂದಿದೆ. ಕವಿತೆ ಗೆಲ್ಲುವ ಸಂದರ್ಭ ಹೆಚ್ಚಾಗಲಿ ಎಂದು ಹಾರೈಸುತ್ತೇನೆ. ಕಣ್ಣಂಚಿನ ಬೆಳಕು ಕವಿತೆಗಳು ಕವಿಗೆ ಹೊಳೆದ ಬೆಳಕಿನ ಅಂಚಿನಲ್ಲಿ ಆಯ್ದು ಪೋಣಿಸಿದ ಮುತ್ತುಗಳು.

ಕವಿ ದೇವರಾಜ್ ನಿಸರ್ಗತನಯ ಅವರ ಈ ಕವಿತೆಗಳು ಓದುಗರ ಲಯಕ್ಕೆ ಸಿಗದಿರಬಹುದು. ಆದರೆ ಓದಿದ ನಂತರ ಹೃದಯದ ಲಯವನ್ನು, ಅದರ ಏಕತಾನತೆಯನ್ನು ಧ್ಯಾನಿಸುವಂತೆ ಮಾಡುತ್ತವೆ. ಸಹಜವಾಗಿ ಬದುಕುವ ಕವಿಗೆ ಕಾವ್ಯ ಪ್ರಯೋಜನದ ಹಂಗು ಇರುವುದಿಲ್ಲ. ಕಾವ್ಯರಚನೆಯು, ಮೊದಲು ತನ್ನನ್ನು ಮನುಷ್ಯನಾಗಲು, ಮಾನವತೆಯ ಬಗ್ಗೆ ಯೋಚಿಸಲು ಹಾದಿ ತೆರೆದಿದೆ ಎಂದುಕೊಂಡು ಬರೆಯಬೇಕಾಗಿದ್ದು ಕವಿಯಾಗುವವನ ಲಕ್ಷಣ. ಇಂತಹ ಲಕ್ಷಣ ದೇವರಾಜ್ ಅವರಲ್ಲಿ ಮತ್ತೆ ಮತ್ತೆ ಗೋಚರಿಸುತ್ತಲೇ ಇರಲಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News