ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ

Update: 2019-10-19 14:29 GMT
ಕೊಲೆ ನಡೆಸಿ ಪರಾರಿಯಾಗುತ್ತಿರುವ ದುಷ್ಕರ್ಮಿಗಳು (ಒಳ ಚಿತ್ರದಲ್ಲಿ ಮೃತ ನವೀನ್)

ಮಂಡ್ಯ, ಅ.19: ಹಾಡ ಹಗಲೇ ಐದು ಮಂದಿಯ ಗುಂಪು ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ(ಭಾರತಿನಗರ) ಮಾರಿಗುಡಿ ರಸ್ತೆಯಲ್ಲಿ ಶನಿವಾರ ನಡೆದಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. 

ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿ ನಿವಾಸಿ ಚಲುವರಾಜು ಎಂಬುವರ ಪುತ್ರ ನವೀನ್ ಅಲಿಯಾಸ್ ಕುಟ್ಟಿ(30) ಕೊಲೆಯಾದ ಯುವಕ. ಈತನ ಮೇಲೆ ಐದು ಮಂದಿ ಯುವಕರು ದಾಳಿ ಮಾಡಿ ಹತ್ಯೆಗೈದು, ಮಚ್ಚನ್ನು ಬಿಸಾಡಿ ಪರಾರಿಯಾಗಿದ್ದಾರೆ. 

ಪಟ್ಟಣದ ಹಲಗೂರು ರಸ್ತೆಯಲ್ಲಿ ಹೊಟೇಲ್ ನಡೆಸುತ್ತಿದ್ದ ನವೀನ್, ಬೆಳಗ್ಗೆ 11 ಗಂಟೆ ಸಮಯದಲ್ಲಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಅರಳಿಮರದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಐವರು ಯುವಕರ ಗುಂಪು ಮಚ್ಚಿನಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ನವೀನ್ ಓಡಲು ಆರಂಭಿಸಿದ್ದು, ದುಷ್ಕರ್ಮಿಗಳು ಆತನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಅಂತಿಮವಾಗಿ ವಿಶ್ವೇಶ್ವರ ವೃತ್ತದ ಬಳಿ ನವೀನ್ ಎದೆಗೆ ಚಾಕುವಿನಿಂದ ಇರಿದಾಗ ಕುಸಿದು ಬಿದ್ದಿದ್ದಾನೆ. ಬಳಿಕ ದುಷ್ಕರ್ಮಿಗಳು ಒಂದೇ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ರಸ್ತೆಯಲ್ಲಿ ಒದ್ದಾಡುತ್ತಿದ್ದ ನವೀನ್‍ನನ್ನು ಕಂಡ ಸಾರ್ವಜನಿಕರು ತಕ್ಷಣ ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಮಿಮ್ಸ್ ಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ಘಟನೆಗೆ ಹಣಕಾಸಿನ ವ್ಯವಹಾರ ಮತ್ತು ಹಳೇ ವೈಷಮ್ಯವೇ ಕಾರಣವೆಂದು ಹೇಳಲಾಗಿದ್ದು, ಈ ಬಗ್ಗೆ ಮೃತ ನವೀನ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 

"ಪೊಲೀಸರು ವೃತ್ತಗಳು ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ವಿಡಿಯೋ ದೃಶ್ಯಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಗುರುತಿಸಲಾಗಿದೆ. ಶೀಘ್ರವೇ ಬಂಧಿಸಲಾಗುವುದು" ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ. 

ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಮಂಜುನಾಥ್  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News