ವಿಪಕ್ಷಗಳ ಸವಾಲು ಇಲ್ಲದಿದ್ದರೆ ಮೋದಿ, ಅಮಿತ್ ಶಾ ಅವರಿಂದ ಇಷ್ಟೊಂದು ರ್ಯಾಲಿಗಳೇಕೆ?
ಮುಂಬೈ, ಅ.20: ತನ್ನ ನಾಯಕತ್ವವನ್ನು ಎದುರಿಸಲು ವಿಪಕ್ಷಗಳ ಸವಾಲು ಇಲ್ಲ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭಾವಿಸುವುದಾದರೆ ರಾಜ್ಯದ ವಿಧಾನಸಭಾ ಚುನಾವಣೆಗೆ ಬಿಜೆಪಿ ನಾಯಕರು ಹಲವಾರು ರ್ಯಾಲಿಗಳನ್ನು ನಡೆಸಿದ್ದೇಕೆ ಎಂದು ಶಿವಸೇನೆ ಪ್ರಶ್ನಿಸಿದೆ.
ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯವರು ರಾಜಕೀಯ ಪ್ರವೇಶಿಸಿರುವುದರಿಂದ ಮುಂದಿನ ವರ್ಷಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಅಂಕಣದಲ್ಲಿ ಶಿವಸೇನೆಯ ನಾಯಕ ಸಂಜಯ್ ರಾವತ್ ಬರೆದಿದ್ದಾರೆ.
ರಾಜ್ಯದಲ್ಲಿ ವಿಪಕ್ಷಗಳ ಶಕ್ತಿ ಕುಂದುತ್ತಿದೆ. ಬಿಜೆಪಿ ನೇತೃತ್ವದ ಮೈತ್ರಿಗೆ ಸವಾಲೊಡ್ಡಲು ಯಾವ ಕುಸ್ತಿಪಟುವೂ ಇಲ್ಲ ಎಂದು ಇತ್ತೀಚೆಗೆ ಫಡ್ನವೀಸ್ ಹೇಳಿದ್ದರು.
"ಚುನಾವಣಾ ಪ್ರಚಾರದಲ್ಲಿ ವಿಪಕ್ಷಗಳ ಅಸ್ತಿತ್ವವೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ 10, ಅಮಿತ್ ಶಾ ಅವರ 30 ರ್ಯಾಲಿಗಳ ಹಿಂದಿನ ಉದ್ದೇಶವೇನು ಎನ್ನುವ ಪ್ರಶ್ನೆ ಹುಟ್ಟುತ್ತದೆ" ಎಂದು ಸಂಜಯ್ ರಾವತ್ ಹೇಳಿದ್ದಾರೆ.