ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಮೇಲೆ ರೌಡಿಶೀಟರ್ ನಿಂದ ಹಲ್ಲೆ: ಇಬ್ಬರ ಬಂಧನ

Update: 2019-10-20 17:37 GMT

ಮೈಸೂರು,ಅ.20: ರೌಡಿಶೀಟರ್ ಗಳು ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಮನಬಂದಂತೆ ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕರ್ತವ್ಯದಲ್ಲಿದ್ದ ಮುಖ್ಯಪೇದೆ ಮಂಜುನಾಥ್ ಅವರ ಮೇಲೆ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮು ಮತ್ತು ತಂಡ ಹಲ್ಲೆ ನಡೆಸಿದ್ದು, ಮಂಜುನಾಥ್ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಇದೀಗ ವೈರಲ್ ಆಗಿದೆ.

ಮಂಜುನಾಥ್ ಮತ್ತು ಆರೋಪಿ ಸೋಮು ನಡುವೆ ಅಂಗಡಿ ಮುಚ್ಚುವ ವಿಚಾರದಲ್ಲಿ ಗಲಾಟೆ ನಡೆದಿದೆ. ಅಂಗಡಿಯನ್ನು ರೌಡಿಶೀಟರ್ ಸೋಮನ ಸಹೋದರಿ ಲತಾ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ 11 ಗಂಟೆಯಾದರೂ ಅಂಗಡಿ ತೆರೆದಿತ್ತು. ಈ ವೇಳೆ ಅಂಗಡಿ ಮುಚ್ಚುವಂತೆ ಹೇಳಲು ಮಂಜುನಾಥ್ ಹೋಗಿದ್ದರು. ಈ ವೇಳೆ ವಾಗ್ವಾದ ಉಂಟಾಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ನಡೆಸಿ ಪರಾರಿ ಆಗಿದ್ದ ಆರೋಪಿ ಸೋಮಶೇಖರ್, ಚಂದ್ರಶೇಖರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿ ರೌಡಿಶೀಟರ್ ಸಹೋದರಿ ಲತಾ ಪರಾರಿಯಾಗಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವರಾಜ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಸೋಮಶೇಖರ್ ನನ್ನು ಕಳೆದ ಚುನಾವಣೆ ಸಂದರ್ಭದಲ್ಲಿ ಪೊಲೀಸರು ಗಡಿಪಾರು ಮಾಡಿದ್ದರು. ಹಲವು ಪ್ರಮುಖ ಪ್ರಕರಣಗಳಲ್ಲಿ ಸೋಮ ಪೊಲೀಸರಿಗೆ ಬೇಕಾಗಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News