ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆಯಲಿದ್ದಾರೆಯೇ ?: ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದು ಹೀಗೆ...

Update: 2019-10-21 11:26 GMT

ರಾಮನಗರ, ಅ.21: ಸಿ.ಪಿ.ಯೋಗೇಶ್ವರ್ ಬಿಜೆಪಿಯ ಹಿರಿಯ ಹಾಗು ಮುಂಚೂಣಿ ನಾಯಕ‌. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದರು.

ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಪಿವೈ ನಮ್ಮ ಪಕ್ಷದ ವರಿಷ್ಠ. ಅವರು ಸದಾ ಕಲಾ ನಮ್ಮ ಪಕ್ಷದ ಉನ್ನತ ಸ್ಥಾನದಲ್ಲಿ ಇರುತ್ತಾರೆ.‌ ಅವರು ಕನಸಿನಲ್ಲಿಯೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಕಾಂಗ್ರೆಸ್ ಸಂಪೂರ್ಣ ತಿರಸ್ಕೃತ ಪಕ್ಷ. ಸಮಾಜ ವಿಭಜನೆ, ಜಾತಿ ಒಡೆಯುವುದು. ಎತ್ತುಕಟ್ಟುವ ಕೆಲಸ ಮಾಡುವ ಕಾಂಗ್ರೆಸ್ ಈಗಾಗಲೇ ಮುಳುಗಡೆಯಾಗುತ್ತಿದೆ ಎಂದು ಆರೋಪಿಸಿದರು.

ಚನ್ನಪಟ್ಟಣದಲ್ಲಿ ಆಗಿರುವ ನೀರಾವರಿ ಸುಧಾರಣೆ ನಮ್ಮ ಪಕ್ಷದ ಕೊಡುಗೆ.‌ ಸಿಪಿವೈ ನಮ್ಮ ಪಕ್ಷದಲ್ಲೇ ಇದ್ದು, ಇನ್ನೂ ಎತ್ತರದ ಸ್ಥಾನ ಏರಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲವು ಖಂಡಿತ ಒಳ್ಳೆಯದಾಗುತ್ತೆ. ಸೆಕೆಂಡ್ ಸ್ಟೇಜ್ ಅನ್ನು ಕಾದು ನೋಡಿ. ಅವರಿಗೆ ಉನ್ನತ ಸ್ಥಾನದೊಂದಿಗೆ ಅವಕಾಶವು ದೊರೆಯಲಿದೆ ಎಂದರು. 

ಸಿಪಿವೈ ಹಿಂದೆ ಸರಿಯುವ ವ್ಯಕ್ತಿ ಅಲ್ಲ.‌ ಸದಾ ಕಾಲ ಮುಂದೆ ಇರುವ ನಾಯಕರು ಅವರು. ಇನ್ನು ಹುಣಸೂರು ಕ್ಷೇತ್ರದಲ್ಲಿ ಚುನಾವಣೆಗೆ ಸಿಪಿವೈ ಇಳಿಯಲ್ಲಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಇನ್ನು ಸಮಯ ಇದೆ, ಮಾತನಾಡೊಣ ಎಂದರು.

ಜಿಎಸ್ ಟಿ ಸರಳೀಕರಣ
ಜಿಎಸ್ ಟಿ ನೀತಿ ಜಾರಿ ಬಳಿಕ ಸಣ್ಣ ಉದ್ಯಮ ಒಡೆತನಕ್ಕೆ ಸುಲುಕಿದೆ‌ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ‌ ಹಿಂದೆ ವ್ಯಾಟ್ ಸಿಸ್ಟಮ್ ಇದ್ದಾಗ ಹೆಚ್ಚಿನ ತೆರಿಗೆ ಕಟ್ಟಬೇಕಿತ್ತು. ಹತ್ತಾರು ರೀತಿ‌ ಟ್ಯಾಕ್ಸ್ ಇತ್ತು. ಅದು ಜನರ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಜಿಎಸ್ ಟಿ ಡೈರೆಕ್ಟ್ ಟ್ಯಾಕ್ಸ್ ಅಗಿರುವ ಹಿನ್ನಲೆಯಲ್ಲಿ‌ ಜನರ ಕಣ್ಣಿಗೆ ಕಾಣುತ್ತಿದೆ. ಜಿಎಸ್ ಟಿ‌ ಇನ್ನೂ ಸರಳೀಕರಣ ಮಾಡಲಾಗುತ್ತಿದೆ.‌ ಒನ್ ನೇಷನ್ ಒನ್ ಮಾರ್ಕೆಟ್ ಜಾರಿಯಲ್ಲಿದೆ. ಇನ್ನಷ್ಟು ಸುಧಾರಣೆ ನಡೆಯಲಿದೆ ಎಂದರು.

ಈ‌ ಹಿಂದೆ ದೊಡ್ಡ ಕುಳಗಳು ಟ್ಯಾಕ್ಸ್ ಕಟ್ಟುತ್ತಿರಲಿಲ್ಲ. ಖಾದಿಗೆ ಸಿಗುವಷ್ಟು ಸೌಲಭ್ಯ ಕರಕುಶಲ ವಸ್ತುಗಳಿಗೆ ದೊರೆಯಲಿದೆ. ವಿಶ್ವದ ಇತರೆ ರಾಷ್ಟ್ರಗಳು ನೆಗಿಟಿವ್ ಗ್ರೋಥ್ ಗೆ ಹೋಗಿವೆ. ಭಾರತವೇ ಉತ್ತಮವಾಗಿದೆ. ಆದರೆ, ಇನ್ನು ಸವಾಲುಗಳಿವೆ.‌ ಅದನ್ನು ಸ್ವೀಕರಿಸಿ ಆರ್ಥಿಕ ಸುಧಾರಣೆಗೆ ಬಿಜೆಪಿ ಸಿದ್ಧ ಇದೆ ಎಂದರು.

ಬರೀ ರಾಜಕೀಯ ಬೇಡ
ಲೋಕಲ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧೆ ಮಾಡಿ ಗೆಲ್ಲುತ್ತದೆ. ಅನರ್ಹ ಶಾಸಕರ ಬಗ್ಗೆ ಇದು ಮಾತನಾಡುವ ಸ್ಥಳ ಅಲ್ಲ‌. ಬರೀ ರಾಜಕೀಯ ಬೇಡ. ಅಭಿವೃದ್ಧಿ ಬಗ್ಗೆಯೂ ಮಾತನಾಡೊಣ ಎಂದು ಅನರ್ಹ ಶಾಸಕರ ಬಗ್ಗೆ ಮಾತನಾಡಲು‌ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News