ಹುಲಿವೇಷ- ಜನಪ್ರಿಯ ದಾಟಿಯ ಕತೆಗಳು

Update: 2019-10-21 18:30 GMT

ಹುಲಿ ವೇಷ ಕರಾವಳಿಯಲ್ಲಿ ಜಾನಪದ ಕಲೆಯಂತೆಯೇ ಬೆಳೆದು ಬಂದಿದೆ. ವೃತ್ತಿ, ಧರ್ಮ, ಸಂಸ್ಕೃತಿ, ಮನರಂಜನೆ ಎಲ್ಲವೂ ಜೊತೆಯಾಗಿ ಮಿಳಿತಗೊಂಡಿರುವ ಕಲೆ ಇದು. ಮಕ್ಕಳ ಬಾಲ್ಯವನ್ನು ರಮ್ಯಗೊಳಿಸುವಲ್ಲಿ, ನವರಾತ್ರಿಯ ಹುಲಿವೇಷದ ಪಾತ್ರ ಬಹುದೊಡ್ಡದು. ಇಂತಹ ಹುಲಿವೇಷವನ್ನು ಇಟ್ಟುಕೊಂಡು ವಿಠಲ್ ಶೆಣೈ ಅವರು ಬರೆದ ನೀಳ್ಗತೆ ಅಥವಾ ಮಿನಿ ಕಾದಂಬರಿಯೇ ‘ಹುಲಿ ವೇಷ’. ಲೇಖಕರೇ ಹೇಳುವಂತೆ ಹುಲಿವೇಷದ ದಂಡನ್ನು ಆಧರಿಸಿ ಬರೆದ ಕತೆ ಸುದೀರ್ಘವಾಗಿ ಅತ್ತ ಸಣ್ಣ ಕತೆಯೂ ಆಗದೆ, ಕಾದಂಬರಿಯೂ ಆಗದೆ ಉಳಿದಾಗ ಅದರ ಜೊತೆಗೆ ಇನ್ನಷ್ಟು ಕತೆಗಳನ್ನು ಸೇರಿಸಿ ಅವರು ಸಂಕಲನ ತಂದಿದ್ದಾರೆ. ನೀಳ್ಗತೆಯ ಜೊತೆಗೆ ಆರು ಕತೆಗಳನ್ನು ಜೋಡಿಸಿದ್ದಾರೆ.

ಭಾನು ಶೆಟ್ಟಿ ಫ್ರೆಂಡ್ಸ್ ಸರ್ಕಲ್ ಹುಲಿಗಳು ಎಂದರೆ ಇಡೀ ಮಂಗಳೂರಿಗೆ ಫೇಮಸ್. 75 ವರ್ಷಗಳಿಂದ ಈ ತಂಡ ಮಂಗಳೂರಿನ ದಸರಾದ ಸಂಭ್ರಮವನ್ನು ಮೇಲೆತ್ತಿ ತೋರಿಸುತ್ತಿದೆ. ಪ್ರತಿ ವರ್ಷದ ಹಾಗೆ ಈ ಟ್ರೂಫ್ ಈ ಬಾರಿಯೂ ದಸರಾದಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲೇ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ. ಇವೆರಡನ್ನೂ ಜೊತೆಗೆ ತಂದು ಕತೆಯನ್ನು ಲೇಖಕರು ಬೆಳೆಸುತ್ತಾ ಹೋಗುತ್ತಾರೆ.

 ಗಾಯಕನೊಬ್ಬನ ಒಳದನಿಯನ್ನು ಹೇಳುವ ‘ಅದೇ ಧ್ವನಿ’, ಸರ್ಪ ದೋಷದ ಹಿನ್ನೆಲೆಯನ್ನು ಇಟ್ಟುಕೊಂಡು ಧನುಷ್‌ನ ಮಾನಸಿಕ ತಳಮಳವನ್ನು ಹೇಳುವ ‘ತಕ್ಷಕನ ದೋಷ’, ಕತ್ತಲ ಕೋಣೆಯೊಳಗಿನ ಕತೆಯನ್ನು ಹೇಳುವ ‘ಅವಳು, ಅವನು ಮತ್ತು ಕೋಣೆ’, ರಾತ್ರಿಯ ನಿದ್ದೆಯಿಲ್ಲದೆ ಬಳಲುತ್ತಿರುವ ಸುಮಂತ್ ಅದನ್ನು ಎದುರಿಸಲಾಗದೆ, ತನ್ನಂಥವರನ್ನೇ ಕೂಡಿಸಿಕೊಂಡು ನಡೆಸುವ ಹೋರಾಟವನ್ನು ಹೇಳುವ ‘ನಿ. ಹೀ. ಸಂ’., ಸುಜಾತಳ ಬಂಗಾರದ ಬಳೆಯ ಕನಸನ್ನು ನನಸು ಮಾಡುವ ನವೀನ್ ಪ್ರಯತ್ನಕ್ಕೆ ಸವಾಲಾಗುವ ವಿಧಿಯನ್ನು ಹೇಳುವ ‘ಬಂಗಾರದ ಬಳೆ’ ಸರಳ ಜನಪ್ರಿಯ ಓದನ್ನು ಬಯಸುವ ಓದುಗರಿಗೆ ಇಷ್ಟವಾಗಬಹುದು. ಒಂದು ರೀತಿಯಲ್ಲಿ ಎಲ್ಲವೂ ಸಮಯ ಕಳೆಯುವುದಕ್ಕಾಗಿ ಓದಬಹುದಾದ ಕತೆಗಳು. ಯಂಡಮೂರಿ ವೀರೇಂದ್ರನಾಥ್, ಕೆ. ಎನ್. ಗಣೇಶಯ್ಯ ಮೊದಲಾದವರ ಪ್ರಭಾವ ಲೇಖಕರ ಮೇಲೆ ಗಾಢವಾಗಿ ಬಿದ್ದಂತಿದೆ.

ಟೋಟಲ್ ಕನ್ನಡ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 206. ಮುಖಬೆಲೆ 160 ರೂ. ಆಸಕ್ತರು 98459 04451 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News