ಧೋನಿ ಕುರಿತು ಗಂಗುಲಿ ಬಳಿ ಇನ್ನೂ ಮಾತನಾಡಿಲ್ಲ: ವಿರಾಟ್ ಕೊಹ್ಲಿ
Update: 2019-10-23 02:47 GMT
ರಾಂಚಿ, ಅ.22: ಮಹೇಂದ್ರ ಸಿಂಗ್ ಧೋನಿ ಅವರ ಅಂತರ್ರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತಂತೆ ನಾನು ನಿಯೋಜಿತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಜೊತೆ ಈ ತನಕ ಚರ್ಚಿಸಿಲ್ಲ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಪ್ರಸ್ತುತ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ವಿರಾಮ ಪಡೆದಿರುವ ಧೋನಿ ಮುಂಬರುವ ಟಿ-20 ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವ ಸಾಧ್ಯತೆಯಿಲ್ಲ. ‘‘ನಾನು ಅವರಿಗೆ(ಗಂಗುಲಿ)ಅಭಿನಂದನೆ ಸಲ್ಲಿಸುವೆ. ಅವರು ಬಿಸಿಸಿಐ ಅಧ್ಯಕ್ಷರಾಗಿರುವುದು ಉತ್ತಮ ಬೆಳವಣಿಗೆ. ಅವರು(ಗಂಗುಲಿ)ಧೋನಿ ಕುರಿತಂತೆ ನನ್ನ ಬಳಿ ಮಾತನಾಡಿಲ್ಲ. ನಾನು ಅವರನ್ನು ಭೇಟಿಯಾಗಿ ಮಾತನಾಡುವ ವಿಶ್ವಾಸವಿದೆ’’ಎಂದರು. ‘‘ನಾನು ಅಕ್ಟೋಬರ್ 24ರಂದು ಕೊಹ್ಲಿ ಬಳಿ ಮಾತನಾಡುವೆ. ನ.3ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿಯಿಂದ ಹೊರಗುಳಿಯುವ ಕುರಿತು ಭಾರತದ ನಾಯಕನೇ ನಿರ್ಧರಿಸಬೇಕಾಗಿದೆ’’ ಎಂದು ಗಂಗುಲಿ ಸೋಮವಾರ ಹೇಳಿದ್ದರು.