ಮತ್ತೊಮ್ಮೆ ಸೋತರೆ ಲಕ್ಷ್ಮಣ ಸವದಿಗೆ ಸಿಎಂ ಪಟ್ಟ: ಮಾಜಿ ಸಚಿವ ಶಿವರಾಜ್ ತಂಗಡಗಿ

Update: 2019-10-29 13:58 GMT

ಕೊಪ್ಪಳ, ಅ.29: ಲಕ್ಷ್ಮಣ ಸವದಿ ಸೋತರೂ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಇದೇ ರೀತಿಯಾಗಿ ಸೋಲನ್ನೇ ಕಾಣುತ್ತಿದ್ದರೆ ಅವರನ್ನು ಸಿಎಂ ಪಟ್ಟದಲ್ಲಿ ಕೂರಿಸುತ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗವಾಡಿದ್ದಾರೆ.

ಮಂಗಳವಾರ ಕಾರಟಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಅವರು ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಸೋಲು, ಗೆಲುವು ಶಾಶ್ವತವಲ್ಲ. ಅದನ್ನು ಜನರೆ ತೀರ್ಮಾನ ಮಾಡುತ್ತಾರೆ. ಸವದಿ ಕೂಡ ಚುನಾವಣೆಯಲ್ಲಿ ಸೋತು ಡಿಸಿಎಂ ಆಗಿದ್ದಾರೆ ಎನ್ನುವುದನ್ನು ಮರೆಯಬಾರದು. ಮತ್ತೊಂದು ಬಾರಿ ಚುನಾವಣೆಯಲ್ಲಿ ಸೋತರೆ ಅವರನ್ನು ಸಿಎಂ ಪಟ್ಟದಲ್ಲಿ ಕೂರಿಸುತ್ತಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ತಿರುಗೇಟು ನೀಡಿದರು.

ಪ್ರಧಾನಿ ಮೋದಿ, ಲಕ್ಷ್ಮಣ ಸವದಿ, ಸಂಸದ ಕರಡಿ ಸಂಗಣ್ಣ ಅವರನ್ನು ಬೈಯುವ ಅವಶ್ಯಕತೆ ನನಗಿಲ್ಲ. ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ ಪರಿಹಾರವನ್ನು ನೀಡಿದರೆ ಈ ಮೂವರು ನಾಯಕರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಂತಾಗ ಸೋಲು ಗೆಲುವಿನ ಬಗ್ಗೆ ಜನರೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News