ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ಕೈಬಿಡುವ ನಿರ್ಧಾರ ಆರೆಸ್ಸೆಸ್ ಅಜೆಂಡಾ: ಜಿಗ್ನೇಶ್ ಮೇವಾನಿ ಆರೋಪ

Update: 2019-10-31 08:28 GMT

ಚಿತ್ರದುರ್ಗ, ಅ.31: ಟಿಪ್ಪು ಸುಲ್ತಾನ್ ಇತಿಹಾಸವನ್ನು ಪಠ್ಯಪುಸ್ತಕದಿಂದ ಕೈಬಿಡುವ ನಿರ್ಧಾರ ಆರೆಸ್ಸೆಸ್ ಅಜೆಂಡವಾಗಿದ್ದು, ಇದು ಕೋಮುವಾದಿ ಮನಸ್ಥಿತಿ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.

ನ್ಯಾಯಾಲಯಕ್ಕೆ ಆಗಮಿಸಲು ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದ ಅವರು, ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದರು.

ಟಿಪ್ಪು ಜಯಂತಿಯನ್ನು ರದ್ದುಪಡಿಸುವ ಮೂಲಕ ಮುಸ್ಲಿಮ್ ಸಮುದಾಯದ ದಮನಕ್ಕೆ ಪ್ರಯತ್ನಗಳು ನಡೆಯುತ್ತಿದೆ. ಹಿಂದೂಗಳನ್ನು ತುಷ್ಟೀಕರಣಕ್ಕಾಗಿ ಇದನ್ನು ಮಾಡಲಾಗುತ್ತಿದೆ. ದೇಶದ ಬಹುಸಂಖ್ಯಾತರು ಕೋಮು ಸೌಹಾರ್ದವನ್ನು ಬಯಸುತ್ತಾರೆ. ಆದರೆ ಬಿಜೆಪಿಗೆ ಅದು ಬೇಕಾಗಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವವಾಡುತ್ತಿದೆ. ನರೇಗಾ ಯೋಜನೆ, ಆರೋಗ್ಯ ಯೋಜನೆಗಳು ಮುಗ್ಗರಿಸಿವೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ರೀತಿಯ ಆರ್ಥಿಕ ಮುಗ್ಗಟ್ಟು ಇದುವರೆಗೆ ಉಂಟಾಗಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಳಿ ಉತ್ತರವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಜಿಗ್ನೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭ ಸಂವಿಧಾನ ಉಳಿವಿಗಾಗಿ ಕರ್ನಾಟಕ ಇದರ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಲಿ ‘ವರ್ತಮಾನದ ರಾಜಕಾರಣ ಮತ್ತು ನಮ್ಮ ಮುಂದಿರುವ ಸಾಧ್ಯತೆಗಳು’ ಎಂಬ ವಿಚಾರದಲ್ಲಿ ಅವರು ಮಾತನಾಡಿದರು.

2018ರ ಎಪ್ರಿಲ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ‘ಮೋದಿ ಕಾರ್ಯಕ್ರಮದಲಿ ಕುರ್ಚಿ ತೂರಿ’ ಎಂಬ ಹೇಳಿಕೆ ನೀಡಿದ ಆರೋಪದ ಮೇಲೆ ಜಿಗ್ನೇಶ್ ವಿರುದ್ದ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗಾಗಿ ಅವರು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗುವುದಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News