ಅಯೋಧ್ಯೆ-ಬಾಬರಿ ವಿವಾದ: 2010ರ ಅಲಹಾಬಾದ್ ಹೈಕೋರ್ಟ್ ನ ಐತಿಹಾಸಿಕ ತೀರ್ಪು ಹೇಳಿದ್ದೇನು?
ಐತಿಹಾಸಿಕ ಅಯೋಧ್ಯೆ ಪ್ರಕರಣದ ತೀರ್ಪು ಇನ್ನೇನು ಕೆಲಕ್ಷಣಗಳಲ್ಲೇ ಹೊರಬೀಳಲಿದೆ. 70 ವರ್ಷಗಳಿಂದ ದೇಶದಲ್ಲಿ ನೆಲೆನಿಂತಿರುವ ಈ ವಿವಾದವು ಹಲವು ಘಟನೆಗಳಿಗೆ ಕಾರಣವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ 4 ದಾವೆಗಳಿಗೆ ಸಂಬಂಧಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿತ್ತು. ಈ ಪ್ರಕರಣದಲ್ಲಿ ನಿರ್ಮೋಹಿ ಅಖಾರ, ಸುನ್ನಿ ವಕ್ಫ್ ಬೋರ್ಡ್ ಮತ್ತು ರಾಮ್ ಲಲ್ಲಾ ಪ್ರಮುಖ ಕಕ್ಷಿದಾರರು. 2010ರ ಸೆಪ್ಟೆಂಬರ್ ನಲ್ಲಿ ತೀರ್ಪು ಹೊರಬಂತು.
ವಿವಾದಿತ 2.27 ಎಕರೆ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿ, ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಉತ್ತರ ಪ್ರದೇಶದ ಸುನ್ನಿ ಕೇಂದ್ರೀಯ ವಕ್ಫ್ ಬೋರ್ಡ್ ಗೆ ನೀಡುವಂತೆ ತೀರ್ಪು ನೀಡಲಾಯಿತು. ಮೂರನೇ ಒಂದು ಭಾಗವನ್ನು ತಲಾ ಹಿಂದೂ ಹಾಗೂ ಮುಸ್ಲಿಮ್ ಕಕ್ಷಿದಾರರಿಗೆ ಮತ್ತು ಮುಖ್ಯ ಜಾಗವನ್ನು ನಿರ್ಮೋಹಿ ಅಖಾರಕ್ಕೆ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ತಿಂಗಳ ಒಳಗಾಗಿ ಇದನ್ನು ಪ್ರಶ್ನಿಸಿ ಹಿಂದೂ ಹಾಗೂ ಮುಸ್ಲಿಂ ಗುಂಪುಗಳು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದವು.
2011ರಲ್ಲಿ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿತು. ಸಂಧಾನ ಪ್ರಕ್ರಿಯೆ ವಿಫಲವಾದ ಬಳಿಕ, ಈ ವರ್ಷದ ಆಗಸ್ಟ್ 6ರಂದು ಪ್ರತಿ ದಿನ ಈ ಪ್ರಕರಣದ ವಿಚಾರಣೆ ನಡೆಸುವ ಸಲುವಾಗಿ ಐದು ಮಂದಿಯ ಸಂವಿಧಾನ ಪೀಠವನ್ನು ರಚಿಸಲಾಯಿತು. 40 ದಿನಗಳ ಸತತ ವಿಚಾರಣೆ ಅಕ್ಟೋಬರ್ 16ರಂದು ಮುಗಿದು, ನವೆಂಬರ್ 17ರೊಳಗೆ ತೀರ್ಪು ನೀಡುವುದಾಗಿ ಘೋಷಿಸಲಾಯಿತು.