'ಎಂಟಿಬಿ ನಾಗರಾಜ್ ಕಟುಕ, ಕುತಂತ್ರಿ' ಎಂದ ಸಹೋದರ

Update: 2019-11-11 14:06 GMT
ಎಂಟಿಬಿ ನಾಗರಾಜ್

ಬೆಂಗಳೂರು, ನ.11: ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಮಾನ, ಮಾರ್ಯಾದೆ ಇಲ್ಲ. ಆತನೊಬ್ಬ ಕಟುಕ, ಕುತಂತ್ರಿ ರಾಜಕಾರಣಿ ಎಂದು ಅವರ ಸಹೋದರ ಪಿಳ್ಳಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಹೊಸಕೋಟೆ ಕ್ಷೇತ್ರದ ಮಲ್ಲಸಂದ್ರದಲ್ಲಿ ಮಾತನಾಡಿದ ಪಿಳ್ಳಪ್ಪ, ನಾಗರಾಜ್ ಮೊದಲು ಸಿದ್ದರಾಮಯ್ಯ ನನ್ನ ಎದೆಯಲ್ಲಿದ್ದಾರೆಂದು ಹೇಳುತ್ತಿದ್ದರು. ಅನಂತರ ಜನರನ್ನು ನನ್ನ ಎದೆಯಲ್ಲಿಟ್ಟುಕೊಂಡಿದ್ದೇನೆಂದು ಹೇಳುತ್ತಿದ್ದರು. ಇದೀಗ ಯಡಿಯೂರಪ್ಪ ಅವರನ್ನು ಎದೆಯಲ್ಲಿಟ್ಟುಕೊಂಡಿದ್ದೇನೆ ಎಂದು ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಾಗರಾಜ್‌ಗೆ ಮಾನ, ಮರ್ಯಾದೆ, ನಾಚಿಕೆ ಯಾವುದೂ ಇಲ್ಲ. ನನ್ನ ತಂದೆಯವರು ಆತನ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡುತ್ತಿದ್ದರು. ಸ್ವಲ್ಪ ಯಾಮಾರಿದರೂ ಆತ ನಿನ್ನನ್ನೇ ಕೆಲಸಕ್ಕಿಟ್ಟುಕೊಂಡು ಬಿಡುತ್ತಾನೆ ಎಂದು ಹೇಳುತ್ತಿದ್ದರು ಎಂದು ಅವರು ಸ್ಮರಿಸಿದರು.

ಕುರಿ ಕಡಿಯುವವನು ಕೂಡ ಒಂದು ನಿಮಿಷ ಯೋಚನೆ ಮಾಡುತ್ತಾನೆ. ಆದರೆ ಎಂಟಿಬಿ ನಾಗರಾಜ್ ಯಾವ ಯೋಚನೆಯನ್ನೂ ಮಾಡುವುದಿಲ್ಲ. ಆತನಿಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಏಟು ತಿಂದು, ಹೊಡೆದಾಡಿಕೊಂಡು ಹೋರಾಟ ಮಾಡಿ ಗೆಲ್ಲಿಸಿದರು. ಆದರೆ, ಅದಕ್ಕೆ ನಾಗರಾಜ್ ಕೊಟ್ಟ ಕೊಡುಗೆ ಏನು? ಎಂದು ಪಿಳ್ಳಪ್ಪ ಇದೇ ವೇಳೆ ಪ್ರಶ್ನಿಸಿದರು.

ಅನ್ನ ನೀಡಿದ ಪಕ್ಷಕ್ಕೆ ಎಂಟಿಬಿ ನಾಗರಾಜ್ ಚೂರಿ ಹಾಕಿದ್ದಾನೆ. ಇನ್ನು ಪ್ರಾಣ ತೆಗೆಯುವುದು ಮಾತ್ರ ಬಾಕಿ ಇದೆ. ಅದನ್ನು ಯಾವಾಗ ಮಾಡುತ್ತಾನೋ ಗೊತ್ತಿಲ್ಲ. ಪಕ್ಷ ದ್ರೋಹ ಮಾಡಿದ ಈತನಿಗೆ ಕ್ಷೇತ್ರದ ಜನತೆ ಬುದ್ಧಿ ಕಲಿಸಬೇಕು ಎಂದು ಅವರು ಇದೇ ವೇಳೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News