ನಿರ್ಭಯಾ ಪ್ರಕರಣದ ಸಾಕ್ಷಿ ಒಬ್ಬ ಸುಳ್ಳುಗಾರ: ಆರೋಪಿಯ ತಂದೆಯಿಂದ ದೂರು
ಹೊಸದಿಲ್ಲಿ, ನ.14: ನಿರ್ಭಯಾ ಪ್ರಕರಣದ ಆರೋಪಿಗಳಲ್ಲೊಬ್ಬನ ತಂದೆ ದಿಲ್ಲಿ ಪೊಲೀಸರಿಗೆ ಈ ಪ್ರಕರಣದ ಏಕೈಕ ಸಾಕ್ಷಿಯ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪವನ್ ಕುಮಾರ್ ಗುಪ್ತಾನ ತಂದೆ ಹೀರಾ ಲಾಲ್ ಗುಪ್ತಾ ನೈಋತ್ಯ ದಿಲ್ಲಿ ಹಾಗೂ ಆರ್ ಕೆ ಪುರಂ ಠಾಣೆಯ ಡಿಸಿಪಿಗೆ ದೂರು ಸಲ್ಲಿಸಿ ಈ ಪ್ರಕರಣದ ಸಾಕ್ಷಿಯಾಗಿರುವ ನಿರ್ಭಯಾ ಸ್ನೇಹಿತ ಒಬ್ಬ ಸುಳ್ಳುಗಾರ ಹಾಗೂ ಹಣ ಪಡೆದು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾನೆಂದು ಆರೋಪಿಸಿದ್ದಾರೆ.
"ನಿರ್ಭಯಾ ಸ್ನೇಹಿತನನ್ನು ಅಕ್ಟೋಬರ್ 12, 2019ರಲ್ಲಿ ನಡೆದ ಈ ಘಟನೆಯ ಸಾಕ್ಷಿಯನ್ನಾಗಿಸಲಾಗಿತ್ತೆಂದು ತಿಳಿದು ಬಂದಿದ್ದು, ಆತ ಹೇಳಿಕೆ ನೀಡಲು ಹಣ ಪಡೆಯುತ್ತಿದ್ದ'' ಎಂದು ನವೆಂಬರ್ 2ರಂದು ಸಲ್ಲಿಸಿರುವ ದೂರಿನಲ್ಲಿ ಹೀರಾ ಲಾಲ್ ಗುಪ್ತಾ ಹೇಳಿದ್ದಾರೆ.
ಆರೋಪಿಗಳನ್ನು ದೋಷಿಗಳೆಂದು ಘೋಷಿಸುವ ತೀರ್ಪು ನೀಡಲು ಕಾರಣವಾದ ಪೊಲೀಸರ ತನಿಖೆಯನ್ನೂ ಗುಪ್ತಾ ಪ್ರಶ್ನಿಸಿದ್ದಾರೆ ಹಾಗೂ ಟಿವಿ ವಾಹಿನಿಯೊಂದರ ಇಬ್ಬರು ಮೂವರು ಪತ್ರಕರ್ತರನ್ನೂ ಸಾಕ್ಷಿಗಳನ್ನಾಗಿ ದೂರುದಾರ ಹೆಸರಿಸಿದ್ದಾರೆ.
ನಿರ್ಭಯಾ ಸ್ನೇಹಿತ ಮಾಧ್ಯಮಗಳಿಗೆ ಸಂದರ್ಶನಕ್ಕಾಗಿ ಹಣ ಪಡೆಯುತ್ತಿದ್ದಾರೆಂದು ಈ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸಿದ್ದಾಗಿ ಟಿವಿ ವಾಹಿನಿಯೊಂದರ ಮಾಜಿ ಆಡಳಿತ ನಿರ್ದೇಶಕ ತಾನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಆದರೆ ಕುಟುಕು ಕಾರ್ಯಾಚರಣೆಯ ವೀಡಿಯೋ ಮಾತ್ರ ಹೊರಬಂದಿರಲಿಲ್ಲ.