ಶಿವಮೊಗ್ಗ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Update: 2019-11-19 12:07 GMT

ಶಿವಮೊಗ್ಗ, ನ. 19: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವರ ಬರ್ಬರ ಹತ್ಯೆ ನಡೆಸಿರುವ ಘಟನೆ ಶಿವಮೊಗ್ಗ ತಾಲೂಕಿನ ದೊಡ್ಡಮಟ್ಟಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. 

ಮಂಜಪ್ಪ (40) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ನಿವಾಸಿ ಆಂಜನೇಯ (28) ಆರೋಪಿಯಾಗಿದ್ದಾನೆ. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಘಟನಾ ಸ್ಥಳಕ್ಕೆ ಸಬ್ ಇನ್ಸ್‍ಪೆಕ್ಟರ್ ಜಗದೀಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲಿಸಿದರು. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಹಿನ್ನೆಲೆ: ಆರೋಪಿ ಆಂಜನೇಯನ ಸಂಬಂಧಿ ಮಹಿಳೆಯೋರ್ವರೊಂದಿಗೆ ಮಂಜಪ್ಪ ಅನೈತಿಕ ಸಂಬಂಧವಿರಿಸಿಕೊಂಡಿದ್ದ. ಈ ವಿಚಾರವಾಗಿ ಈ ಹಿಂದೆ ಇಬ್ಬರ ನಡುವೆಯೂ ಗಲಾಟೆಯಾಗಿ, ರಾಜಿ ಸಂಧಾನದಲ್ಲಿ ಜಗಳ ಕೊನೆಗೊಂಡಿತ್ತು ಎನ್ನಲಾಗಿದೆ. 

ಮಂಗಳವಾರ ಮುಂಜಾನೆ ಮಂಜಪ್ಪ ಮತ್ತೆ ಮಹಿಳೆಯ ಮನೆಯಲ್ಲಿ ಕಾಣಿಸಿಕೊಂಡಿದ್ದ. ಈ ವಿಚಾರ ತಿಳಿದ ಆಂಜನೇಯನು ಸ್ಥಳಕ್ಕೆ ತೆರಳಿ ಮಂಜಪ್ಪನ ಜೊತೆ ಜಗಳ ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News