ಪಂಜಾಬ್: ಎಸ್‌ಎಡಿ ಮುಖಂಡನ ಹತ್ಯೆಗೈದು ಕಾಲುಗಳನ್ನು ತುಂಡರಿಸಿದ ದುಷ್ಕರ್ಮಿಗಳು

Update: 2019-11-19 14:56 GMT

ಬಟಾಲಾ, ನ.19: ಗುರುದಾಸಪುರ ಶಿರೋಮಣಿ ಅಕಾಲಿ ದಳ ಘಟಕದ ಉಪಾಧ್ಯಕ್ಷ ದಲ್ಬೀರ್ ಸಿಂಗ್ (55) ಎನ್ನುವವರನ್ನು ಕೋಳಿ ಫಾರ್ಮ್‌ನ ಮಾಲಿಕ ಮತ್ತು ಆತನ ಪುತ್ರರು ಗುಂಡಿಟ್ಟು ಹತ್ಯೆಗೈದು ಬಳಿಕ ಕಾಲುಗಳನ್ನು ತುಂಡರಿಸಿದ ಭೀಕರ ಘಟನೆ ಸೋಮವಾರ ರಾತ್ರಿ ಇಲ್ಲಿಗೆ ಸಮೀಪದ ಧಿಲ್ವನ್ ಗ್ರಾಮದಲ್ಲಿ ನಡೆದಿದೆ.

 ಗ್ರಾಮದ ಮಾಜಿ ಸರಪಂಚರೂ ಆಗಿದ್ದ ದಲ್ಬೀರ್ ಸೋಮವಾರ ಬೆಳಿಗ್ಗೆ ಕೋಳಿಫಾರ್ಮ್‌ನ ಮಾಲಕ ಬಲ್ವಿಂದರ್ ಸಿಂಗ್ (55) ಮತ್ತು ಇನ್ನೋರ್ವ ವ್ಯಕ್ತಿಯ ನಡುವಿನ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ್ದರು. ರಾಜಿ ಸಂಧಾನವೊಂದು ಏರ್ಪಟ್ಟಿತ್ತಾದರೂ ದಲ್ಬೀರ್ ಬಗ್ಗೆ ಬಲ್ವಿಂದರ್ ಅಸಮಾಧಾನಗೊಂಡಿದ್ದ. ರಾತ್ರಿ ದಲ್ಬೀರ್ ಮನೆಗೆ ನುಗ್ಗಿದ ಬಲ್ವಿಂದರ್,ಆತನ ಪುತ್ರರಾದ ಮೇಜರ್ ಸಿಂಗ್ ಮತ್ತು ಮನದೀಪ್ ಸಿಂಗ್ ಹಾಗೂ ಇತರ ಆರು ಜನರು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

 ಇದಾದ ಬಳಿಕವೂ ಕ್ರೋಧ ತೀರದ ಬಲ್ವಿಂದರ್ ಹರಿತವಾದ ಆಯುಧದಿಂದ ಅವರ ಕಾಲುಗಳನ್ನು ಕತ್ತರಿಸಿ ಎಸೆದಿದ್ದಾನೆ. ಗುಂಪು ಪರಾರಿಯಾಗುವ ಮುನ್ನ, ಈ ಬಗ್ಗೆ ಬಾಯಿಬಿಟ್ಟರೆ ಗಂಭೀರ ಪರಿಣಾಮಗಳನ್ನ್ನು ಎದುರಿಸಬೇಕಾಗುತ್ತದೆ ಎಂದು ಮನೆಮಂದಿಗೆ ಬೆದರಿಕೆಯೊಡ್ಡಿದೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News