ನ.20ರಂದು ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ ಸಭೆ

Update: 2019-11-19 17:19 GMT

ಬೆಂಗಳೂರು, ನ.19: ಪರಿಶಿಷ್ಟ ಜಾತಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯಿಸಲು ಪೂರ್ವಭಾವಿ ಸಭೆಯನ್ನು ನ.20ರಂದು ಬೆಳಗ್ಗೆ 11 ಗಂಟೆಗೆ ಗಾಂಧಿಭವನದಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗಕ್ಕೆ ಡಿ.10ರೊಳಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕಾಗಿದೆ. ಈ ಬಗ್ಗೆ ಸಮುದಾಯದ ಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸುವ ಸಲುವಾಗಿ ಈ ಸಭೆ ಕರೆಯಲಾಗಿದೆ. ಇದರಲ್ಲಿ ದಲಿತ ಮುಖಂಡರು ನಿವೃತ್ತ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕಾಂತರಾಜು ವರದಿಯನ್ನು ಸಿದ್ಧಪಡಿಸಿ ರಾಜ್ಯದಲ್ಲಿ ಜಾತಿ ಗಣತಿ ಮಾಡಿಸಲಾಗಿದೆ. 1931ರಲ್ಲಿ ನಡೆದ ಮೊದಲ ಜನಗಣತಿ ಅಧಾರದ ಮೇಲೆ ಇಂದಿಗೂ ಕೂಡ ಮೀಸಲಾತಿ ನೀಡಲಾಗುತ್ತಿದೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು ಶೇ.24ರಷ್ಟು ಇದ್ದು, ಕಾಂತರಾಜು ವರದಿಯನ್ನು ಜಾರಿಗೂಳಿಸಿದರೆ ರಾಜ್ಯದಲ್ಲಿರುವ ಕಡು ಬಡವರಿಗೂ ಸಹ ಮೀಸಲಾತಿ ದೊರೆಯಲಿದೆ ಎಂದು ತಿಳಿಸಿದರು.

ನ.20ರಂದು ನಡೆಯಲಿರುವ ಸಭೆಯಲ್ಲಿ ದಲಿತ ಮುಖಂಡರೆಲ್ಲಾ ಸೇರಿ ಒಂದು ನಿರ್ಧಾರ ಕೈಗೊಂಡು ಒಂದು ವರದಿ ವರದಿಯನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದಲ್ಲಿ ರಚಿಸಲಾಗಿರುವ ಏಕ ಸದಸ್ಯ ಆಯೋಗಕ್ಕೆ ಸವಿವರವಾದ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News