ಭಾರತ-ಚೀನಾವನ್ನು ಬೌದ್ಧ ವಿಚಾರಧಾರೆಗಳು ಬೆಸೆದಿವೆ: ವೇಣುಗೋಪಾಲ್

Update: 2019-11-19 17:08 GMT

ಬೆಂಗಳೂರು, ನ.19: ಭಾರತದ ಬೌದ್ಧ ಧರ್ಮ ಇಂದು ಚೀನಾದಲ್ಲಿ ಹೆಚ್ಚ ಪ್ರಚಲಿತವಾಗಿದೆ. ಹಾಗೂ ಬೌದ್ಧ ವಿಚಾರಧಾರೆಗಳು ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬೆಸೆದಿವೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು.

ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ, ಯುಜಿಸಿ ಮಾನವಸಂಪನ್ಮೂಲ ಅಭಿವೃದ್ಧಿ ಭಾಗವು ಚೀನಾ ರಾಷ್ಟ್ರದ ಚೆಯುಂಗ್ ಕಾಂಗ್ ಪದವಿ ಕಾಲೇಜಿನ ಪ್ರವಾಸಿ ವಿದ್ಯಾರ್ಥಿಗಳಿಗೆಂದು ಆಯೋಜಿಸಿದ್ದ ಒಂದು ದಿನದ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚೀನಾ ಮತ್ತು ಭಾರತ ಜಾಗತಿಕ ಮಟ್ಟದಲ್ಲಿ ದೊಡ್ಡ ಗಾತ್ರದ ಆರ್ಥಿಕ ವಹಿವಾಟು ನಡೆಸುತ್ತಿರುವ ರಾಷ್ಟ್ರಗಳಾಗಿದ್ದು, ಅಭಿವೃದ್ಧಿಯ ಪಥದಲ್ಲಿ ಎರಡು ರಾಷ್ಟ್ರಗಳು ಒಂದನ್ನೊಂದು ಎಲ್ಲಾ ಆಯಾಮದಲ್ಲೂ ಸಹಕಾರಿಯಾಗಿ ಸಾಗಬೇಕು. ಮತ್ತು ವಿಶ್ವಮಟ್ಟದಲ್ಲಿ ಬೆಂಗಳೂರಿನ ವಿಜ್ಞಾನಸಂಪತ್ತು ಮತ್ತು ಶಾಂತ ವಾತಾವರಣ ಪ್ರಂಪಂಚದ ವಿವಿಧ ಭಾಗಗಳ ಹೂಡಿಕೆದಾರರನ್ನು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಉದ್ದಿಮೆದಾರರನ್ನು ಆರ್ಕಷಿಸುತ್ತಿದೆ ಎಂದು ಅವರು ಹೇಳಿದರು.

ಬೆಂವಿವಿಯ ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ, ಭಾರತ ಮತ್ತು ಚೀನಾ, ಉನ್ನತ ಶಿಕ್ಷಣವ್ಯವಸ್ಥೆಯಲ್ಲಿ ಸಹೋದರ ರಾಷ್ಟ್ರಗಳಾಗಿವೆ ಎಂದರು. ಶೃಂಗಸಭೆಯಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಎಂ.ಜೆ.ವಿನೋದ್, ಅರ್ಥಶಾಸ್ತ್ರ ವಿಭಾಗದ ಪ್ರೊ.ಎಸ್.ಆರ್.ಕೇಶವ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರೊ.ಬಿ.ಎಲ್. ಮುರಳಿಧರ ಕ್ರಮವಾಗಿ ಭಾರತೀಯ ರಾಜಕೀಯದಲ್ಲಿನ ಪ್ರಮುಖ ಸಮಸ್ಯೆ ಮತ್ತು ಸವಾಲು, ಭಾರತೀಯ ಅರ್ಥಿಕ ನೀತಿಯ ಲಕ್ಷಣ ಹಾಗೂ ಭಾರತದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆ ಮತ್ತು ಸವಾಲು ಕುರಿತು ವಿಷಯವನ್ನು ಮಂಡಿಸಿ ವಿದೇಶಿ ವಿದ್ಯಾರ್ಥಿಗಳೊಟ್ಟಿಗೆ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News