ಗಲ್ಲಿಗೇರಿಸಿ ಇಲ್ಲವೇ ಬೆಂಕಿ ಹಚ್ಚಿ ಸಾಯಿಸಿ: ತೆಲಂಗಾಣ ಅತ್ಯಾಚಾರ ಆರೋಪಿಗಳ ಕುಟುಂಬಸ್ಥರು

Update: 2019-12-01 09:36 GMT

ಹೈದರಾಬಾದ್: ನಗರದ ಹೊರವಲಯದಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಮರಣ ಡನೆ ವಿಧಿಸಿದರೂ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಆರೋಪಿಗಳ ಕುಟುಂಬದವರು ಹೇಳಿದ್ದಾರೆ.

"ಆತನನ್ನು ಗಲ್ಲಿಗೇರಸಲಿ ಅಥವಾ ವೈದ್ಯೆಗೆ ಮಾಡಿದಂತೆ ಬೆಂಕಿ ಹಚ್ಚಿ ಸಾಯಿಸಲಿ" ಎಂದು ಆರೋಪಿ ಸಿ.ಚೆನ್ನಕೇಶವುಲು ಎಂಬಾತನ ತಾಯ ಶ್ಯಾಮಲಾ ಗುಡುಗಿದ್ದಾರೆ. ಆರೋಪಿ ಚನ್ನಕೇಶವುಲು ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಮಕತಾಲ ಮಂಡಲದ ಗುಡಿಗಂಡ್ಲಾ ಗ್ರಾಮದ ಮೂಲದವನು. ಗುರುವಾರ ಬೆಳಿಗ್ಗೆ ವಿಚಾರಣೆಗಾಗಿ ಪೊಲೀಸರು ಆರೋಪಿಯನ್ನು ಕರೆದೊಯ್ದಾಗ ಪತಿ ಜಿಗುಪ್ಸೆಯಿಂದ ಮನೆಬಿಟ್ಟು ಹೋಗಿದ್ದಾಗಿ ಶ್ಯಾಮಲಾ ಹೇಳಿದ್ದಾರೆ.

ವೈದ್ಯೆಯ ಕುಟುಂಬದ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಅವರು ತಿಳಿಸಿದ್ದಾರೆ. "ನನಗೂ ಮಗಳಿದ್ದಾಳೆ. ಮಹಿಳೆಯ ಕುಟುಂಬದ ನೋವು ನನಗೆ ಅರ್ಥವಾಗುತ್ತದೆ. ಇಂಥ ಹೇಯ ಕೃತ್ಯ ಎಸಗಿದ ಮಗನನ್ನು ನಾನು ಸಮರ್ಥಿಸಿಕೊಂಡರೆ, ನನ್ನನ್ನು ಜನ ದ್ವೇಷಿಸುತ್ತಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಐದು ತಿಂಗಳ ಹಿಂದೆ ಆತ ಇಷ್ಟಪಟ್ಟ ಹುಡುಗಿಯ ಜತೆ ಮದುವೆ ಮಾಡಿಸಿದ್ದೇವೆ ಎಂದು ವಿವರಿಸಿದರು.

ಜೊಳ್ಳು ಶಿವ ಹಾಗೂ ಜೊಳ್ಳು ನವೀನ್ ಎಂಬ ಆರೋಪಿಗಳು ಗುಡಿಗಂಡ್ಲದವರಾದರೆ, ಮತ್ತೊಬ್ಬ ಆರೋಪಿ ಆರೀಫ್, ಜಕ್ಲೇರ್‍ನ ವನು. ಆರೀಫ್ ತಾಯಿ ಘಟನೆಯಿಂದ ವಿಚಲಿತರಾಗಿದ್ದು, ತನ್ನ ಲಾರಿ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾಗಿ ಆರೀಫ್ ಮನೆಯಲ್ಲಿ ಹೇಳಿಕೊಂಡಿದ್ದ. ಪಶುವೈದ್ಯೆಯ ಶವವನ್ನು ಒಯ್ಯಲು ಆರೀಫ್ ಸಹಕರಿಸಿದ್ದ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News