ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Update: 2019-12-05 04:22 GMT

ಮಂಡ್ಯ, ಡಿ.4: ಸಾಲದ ಬಾಧೆ ತಾಳಲಾರದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಮಾಕವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಣ್ಣತಮ್ಮೇಗೌಡರ ಪುತ್ರ ದೇವೇಗೌಡ(55) ಮೃತರು. ದೇವೇಗೌಡ ಅವರು ಟ್ರಾಕ್ಟರ್ ಕೊಳ್ಳಲು ಕೊಟಕ್ ಮಹೀಂದ್ರಾ ಫೈನಾನ್ಸ್ ಕಂಪನಿಯಿಂದ 5 ಲಕ್ಷ ರೂ.ಸಾಲ ಹಾಗೂ ಕೃಷಿ ಚಟುವಟಿಕೆಗೆ ಸುಮಾರು 5 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ.

ಕೊಳವೆ ಬಾವಿಗಳು ನೀರಿಲ್ಲದೇ ಬತ್ತಿಹೋಗಿ ಬಾಳೆ, ಕಬ್ಬು ಮತ್ತು ಭತ್ತದ ಬೆಳೆಗಳು ಒಣಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದರಿಂದ ಮನನೊಂದು ತನ್ನ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಮೃತರಿಗೆ ಪತ್ನಿ ಯಶೋಧಮ್ಮ, ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಈ ಸಂಬಂಧ ಪತ್ನಿ ಕೆಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News