ಬೀದರ್: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಮಹಿಳೆ ಸಜೀವ ದಹನ
Update: 2019-12-05 06:07 GMT
ಬೀದರ್, ಡಿ.5: : ಎ.ಸಿ. ಬಿಸಿಯಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.
ಉದಯಕುಮಾರ್ ಎಂಬವರ ಪತ್ನಿ ಕಲ್ಯಾಣಿ(39) ಎಂಬವರೇ ಕಾರಿನಲ್ಲೇ ಸಜೀವದಹನಗೊಂಡ ಮಹಿಳೆ. ಪತಿ ಉದಯಕುಮಾರ್ ಮತ್ತು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಉದಗೀರ್ ನಿಂದ ಹೈದರಾಬಾದ್ ಗೆ ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಏಕಾಏಕಿ ಕಾರಿನ ಎಸಿ ಬಿಸಿಯಾಗಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿತು. ಸೀಟ್ ಬೆಲ್ಟ್ ಕಟ್ಟಿದ್ದ ಮಹಿಳೆ ಅದನ್ನು ತೆಗೆಯಲು ಸಾಧ್ಯವಾಗದೆ ಕಾರಿನೊಳಗೆ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.