ಮೀಸಲಾತಿ ಸಾಮಾಜಿಕ ನ್ಯಾಯ: ನಿವೃತ್ತ ನ್ಯಾ. ಎಚ್.ಎನ್ ನಾಗಮೋಹನದಾಸ್

Update: 2019-12-10 07:53 GMT

ಕಲಬುರಗಿ, ಡಿ.10: ದೇಶದಲ್ಲಿ ಜಾತಿ ಜಾತಿಗಳ ಮಧ್ಯೆ ವರ್ಗ ವರ್ಗಗಳ ಮಧ್ಯೆ ಅಸಮಾನತೆ ತಾಂಡವಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನ್ಯಾಯಕ್ಕೆ ಒಳಗಾದ ಜನಗಳಿಗೆ ನ್ಯಾಯ ಕೊಡಬೇಕು ಎಂದು ಮೀಸಲಾತಿ ಜಾರಿಗೆ ತಂದರು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಹೇಳಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಕಲ್ಯಾಣ ಘಟಕದ ವತಿಯಿಂದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೀಸಲಾತಿ ನೂರು ವರ್ಷ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ಮೀಸಲಾತಿ ಸೌಲಭ್ಯ ಪಡೆಯುವುದು ಸಂವಿಧಾನಬದ್ಧ ಹಕ್ಕು ಇದೆ. ಆದರೆ ದೇಶದಲ್ಲಿ ಮೀಸಲಾತಿ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇಲ್ಲಿ ಎಲ್ಲ ವರ್ಗದ ಜನರು ಮೀಸಲಾತಿ ಫಲಾನುಭವಿಗಳೇ ಆದರೂ ಮೀಸಲಾತಿ ಬಗ್ಗೆ ಜನಗಳಿಗೆ ಕೆಟ್ಟ ಅಭಿಪ್ರಾಯ ಇದೆ. ಕೇಂದ್ರ ಸರ್ಕಾರದಲ್ಲಿ 6 ಲಕ್ಷ ಹುದ್ದೆಗಳನ್ನು ಭರ್ತಿ ಆಗಬೇಕು ಅದು ಆಗುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ 2 ಲಕ್ಷ 54 ಸಾವಿರ ಹುದ್ದೆಗಳನ್ನು ಖಾಲಿ ಬಿದ್ದಿವೆ. ಉದ್ಯೋಗದ ಬಗ್ಗೆ ಯಾರೊಬ್ಬರು ಮಾತಾಡುತ್ತಿಲ್ಲ. ಇದು ತುಂಬಾ ದುರಂತ. ಗುತ್ತಿಗೆ ಕಾರ್ಮಿಕರಿಗೆ ಮೀಸಲಾತಿ ಕೊಡುತ್ತಿಲ್ಲ. ಈ ಮೀಸಲಾತಿ ಸಾಮಾಜಿಕ ನ್ಯಾಯ ಇದನ್ನು ತೆಗೆದು ಹಾಕಲು ತುಂಬಾ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ಉರಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕೆಲವರು ಮೀಸಲಾತಿ ಬಗ್ಗೆ ಹೇಳಿಕೊಳ್ಳಕ್ಕೆ ಮುಜುಗರ ಪಟ್ಟಿಕೊಳ್ಳುತ್ತಾರೆ. ಮೀಸಲಾತಿ ಸಾಮಾಜಿಕ ನ್ಯಾಯದ ಪ್ರತಿಬಿಂಬ ಹೊರತು ಅದು ಬಿಕ್ಷೆ ಅಲ್ಲ. ಅಸ್ಪೃಶ್ಯರ ನೋವು ಅಸ್ಪೃಶ್ಯರಿಗೆ ಮಾತ್ರ ಗೊತ್ತು. ನ್ಯಾಯಾಲಯದ ನ್ಯಾಯಾಧೀಶರು ಸಂವಿಧಾನವನ್ನು ತಾಂತ್ರಿಕವಾಗಿ ಓದುತ್ತಿದ್ದಾರೆ ಹೊರತಾಗಿ ತಾತ್ವಿಕವಾಗಿ ಓದುತ್ತಿಲ್ಲ ಎಂದು ಅವರು ಹೇಳಿದರು.

ಪ್ರಭಾರಿ ಕುಲಪತಿ ಪ್ರೊ, ಲಕ್ಷ್ಮಣ ರಾಜನಳ್ಕರ್, ಕುಲಸಚಿವ ಪ್ರೊ, ಸಿ ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ, ಸಂಜೀವಕುಮಾರ ಕೆ. ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಕಲ್ಯಾಣ ಘಟಕದ ಅಧ್ಯಕ್ಷ ಡಾ. ಗಣಪತಿ ಸಿಂಧೆ, ಡಾ. ವಿ ಟಿ ಕಾಂಬಳೆ, ಡಾ. ಡಿ ಬಿ ಪಾಟೀಲ, ಡಾ. ಎನ್ ಜಿ ಕಣ್ಣೂರ, ಡಾ. ಹಣಮಂತ ಜಂಗೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News