ಕೋಲಾರದಲ್ಲಿ ಸಿಎಎ ಬೆಂಬಲಿಸಿ ಮೆರವಣಿಗೆ: ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
Update: 2020-01-04 16:28 GMT
ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶನಿವಾರ ಮೆರವಣಿಗೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರು ಹಾಗೂ ಭಾರತೀಯ ನಾಗರಿಕ ರಕ್ಷಣಾ ವೇದಿಕೆ ಸದಸ್ಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು. ಪೊಲೀಸರ ನಿರ್ಬಂಧದ ನಡುವೆಯೂ ಬಿಜೆಪಿ ಮತ್ತು ಭಾರತೀಯ ನಾಗರಿಕ ರಕ್ಷಣಾ ವೇದಿಕೆ ಸದಸ್ಯರು ಪ್ರವಾಸಿ ಮಂದಿರದ ಬಳಿಯಿಂದ ಮೆರವಣಿಗೆ ನಡೆಸಲು ಮುಂದಾಗಿದ್ದು, ಈ ವೇಳೆ ಪೊಲೀಸರು ಮೆರವಣಿಗೆಗೆ ತಡೆಯೊಡ್ಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಬ್ಯಾರಿಕೇಡ್ ಕೆಡವಿ ಮುನ್ನುಗ್ಗಲು ಯತ್ನಿಸಿದ್ದು, ಪರಿಸ್ಥಿರಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.