ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ: ರಾಜ್ಯ ಸರಕಾರದ ವಿರುದ್ಧ ರಂಗಕರ್ಮಿ ಪ್ರಸನ್ನ ಕಿಡಿ

Update: 2020-01-09 12:41 GMT

ಬೆಂಗಳೂರು, ಜ. 9: ‘ಶೃಂಗೇರಿಯಲ್ಲಿ ನಾಳೆ(ಜ.10)ಯಿಂದ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವು ನಡೆಯದಂತೆ ಮಾಡಲು ಯತ್ನಿಸುತ್ತಿರುವ ರಾಜ್ಯ ಸರಕಾರದ ನಡೆ ಖಂಡನೀಯ’ ಎಂದು ಹಿರಿಯ ರಂಗಕರ್ಮಿ ಹಾಗೂ ಲೇಖಕ ಪ್ರಸನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಕನ್ನಡ ಮತ್ತು ಸಂಸ್ಕ್ರತಿ ಮಂತ್ರಿ ಸಿ.ಟಿ.ರವಿ, ಪೊಲೀಸರು ಹಾಗೂ ಶೃಂಗೇರಿ ನಗರಸಭೆ, ವಿವಿಧ ರೀತಿಯಲ್ಲಿ ಸಮ್ಮೇಳನಕ್ಕೆ ಅಡೆತಡೆ ಉಂಟು ಮಾಡುತ್ತಿದೆ ಎಂದು ತಿಳಿದು ಆಘಾತವಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಇದು, ಸಾಂಸ್ಕ್ರತಿಕ ಸ್ವಾಯತ್ತತೆಯ ಮೇಲೆ ಸರಕಾರ ನಡೆಸಿರುವ ನೇರ ಹಲ್ಲೆಯಾಗಿದೆ. ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಸರಕಾರದ ಈ ನಡೆಯನ್ನು ಪ್ರತಿಭಟಿಸಬೇಕು, ಹಾಗೂ ಸಂಸ್ಥೆಯ ಸ್ವಾಯತ್ತತೆಯನ್ನು ಸರಕಾರವು ಗೌರವಿಸುವ ತನಕ ಸರಕಾರದ ಸಹಾಯಧನವನ್ನು ತಿರಸ್ಕರಿಸಬೇಕು’ ಎಂದು ಪ್ರಸನ್ನ ಅವರು ಸಲಹೆ ಮಾಡಿದ್ದಾರೆ.

‘ಕನ್ನಡ ಜನತೆ ತಾನೇ ಮುಂದೆ ನಿಂತು ಸಮ್ಮೇಳನವನ್ನು ಯಶಸ್ವಿಯಾಗಿಸಲು ಹೊರಟಿರುವುದು ಹಾಗೂ ಹಣ ಮತ್ತು ಇತರೆ ಸಹಾಯ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಬ್ಬ ಸಾಮಾನ್ಯ ಸಾಂಸ್ಕೃತಿಕ ಕಾರ್ಯಕರ್ತನಾದ ನಾನು ಈ ಕೆಲಸದಲ್ಲಿ ಹೆಮ್ಮೆಯಿಂದ ಕೈಜೋಡಿಸ ಬಯಸುತ್ತೇನೆ’ ಎಂದು ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News