370ನೇ ವಿಧಿ ರದ್ದತಿ ಬೆಂಬಲಿಸಿದರೆ ಭಾರತಕ್ಕೆ ಮರಳಬಹುದೆಂದು ಮೋದಿ, ಶಾ ಹೇಳಿದ್ದರು: ಝಾಕಿರ್ ನಾಯ್ಕ್

Update: 2020-01-11 11:02 GMT

ಹೊಸದಿಲ್ಲಿ: ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕಳುಹಿಸಿದ ಪ್ರತಿನಿಧಿಯೊಬ್ಬರು ತಮ್ಮನ್ನು ಭೇಟಿಯಾಗಿ ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಸರಕಾರದ ಕ್ರಮವನ್ನು ಸಮರ್ಥಿಸಿ ಮಾತನಾಡಿದರೆ ಭಾರತಕ್ಕೆ ಹಿಂದಿರುಗಲು 'ಸುರಕ್ಷಿತ ಹಾದಿ' ಒದಗಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದರು ಆದರೆ ತಾನು ಅವರ ಆಫರ್ ಅನ್ನು ತಿರಸ್ಕರಿಸಿದೆ ಎಂದು ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಹೇಳಿದ್ದಾರೆ.

ಸದ್ಯ ಮಲೇಷ್ಯಾದಲ್ಲಿ ನೆಲೆಸಿರುವ ಝಾಕಿರ್ ನಾಯ್ಕ್ ಈ ಮೇಲಿನ ಹೇಳಿಕೆಯನ್ನು ವೀಡಿಯೊ ಒಂದರಲ್ಲಿ ನೀಡಿದ್ದಾರೆ. ಇಸ್ಲಾಮಿಕ್ ವಿದ್ವಾಂಸ ಹಾಗೂ ಇಸ್ಲಾಮಿಕ್ ಸೆಮಿನರಿ ಆಫ್ ಅಮೆರಿಕಾದ ಡೀನ್ ಯಾಸಿರ್ ಖಾಧಿ ಎಂಬವರು ಜನವರಿ 9ರಂದು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಈ ಕುರಿತು ಬರೆದಿದ್ದಕ್ಕೆ ಪ್ರತಿಕ್ರಿಯೆಯಾಗಿ ನಾಯ್ಕ್ ವೀಡಿಯೊ ಬಿಡುಗಡೆಗೊಳಿಸಿದ್ದಾರೆ.

“ಕಾಶ್ಮೀರದಲ್ಲಿ ಮೋದಿ ಸರಕಾರದ ಕ್ರಮವನ್ನು ಸಮರ್ಥಿಸಿದರೆ ಝಾಕಿರ್ ನಾಯ್ಕ್ ಅವರ ಮೇಲಿರುವ ಎಲ್ಲಾ ಆರೋಪಗಳನ್ನು ಕೈಬಿಟ್ಟು ಅವರ ಎಲ್ಲಾ ಆಸ್ತಿಯನ್ನು ಅವರಿಗೆ ವಾಪಸ್ ನೀಡಿ ಅವರಿಗೆ ಭಾರತಕ್ಕೆ ಮರಳಲು ಸಹಾಯ ಮಾಡಲಾಗುವುದು ಎಂದು  ಬಿಜೆಪಿ ಸರಕಾರದ ಪ್ರತಿನಿಧಿ ಅವರಿಗೆ ಹೇಳಿದರು.  ನಾಯ್ಕ್ ವಿರುದ್ಧ ನಿಜವಾಗಿಯೂ ಯಾವುದೇ ಪ್ರಕರಣವಿಲ್ಲ, ಎಲ್ಲವೂ ರಾಜಕೀಯ ಪ್ರೇರಿತ ಎಂಬುದು ಇದರಿಂದ ತಿಳಿಯುತ್ತದೆ,'' ಎಂದು ಖಾಧಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದರು.

ಈ ಫೇಸ್ ಬುಕ್ ಪೋಸ್ಟ್ ನಂತರ ತಮ್ಮನ್ನು ಹಲವಾರು ಪತ್ರಕರ್ತರು ಸಂಪರ್ಕಿಸಿದ್ದರು ಎಂದು ವೀಡಿಯೊದಲ್ಲಿ ಝಾಕಿರ್ ನಾಯ್ಕ್ ಹೇಳಿಕೊಂಡಿದ್ದಾರೆ.

“ತನ್ನನ್ನು ಭೇಟಿಯಾದ ಭಾರತ ಸರಕಾರದ ಪ್ರತಿನಿಧಿ ತಾವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೇರ ಸೂಚನೆಯಂತೆ ಬಂದಿದ್ದಾಗಿ ಹಾಗೂ ತಮ್ಮ ಹಾಗೂ ಭಾರತ ಸರಕಾರದ ನಡುವೆ ಇರುವ ತಪ್ಪು ತಿಳುವಳಿಕೆಗಳನ್ನು ದೂರಗೊಳಿಸುವುದಾಗಿ ಹಾಗೂ ಭಾರತಕ್ಕೆ ತೆರಳಲು ಸುರಕ್ಷಿತ ಹಾದಿ ಒದಗಿಸಲು ಬಯಸಿದ್ದಾಗಿ ಆತ ಹೇಳಿಕೊಂಡಿದ್ದರು,'' ಎಂದು ನಾಯ್ಕ್ ವೀಡಿಯೊದಲ್ಲಿ ಹೇಳಿದ್ದಾರೆ.

ಹಲವಾರು ಗಂಟೆಗಳ ಕಾಲ ನಡೆದ ಈ ಮಾತುಕತೆಯಲ್ಲಿ ಭಾರತ ಸರಕಾರದ ಪ್ರತಿನಿಧಿ ಸಂವಿಧಾನದ 370ನೇ ವಿಧಿ ರದ್ದತಿ ಬೆಂಬಲಿಸಲು ಹೇಳಿದ್ದರು, ನಾನು ನಿರಾಕರಿಸಿದೆ ಹಾಗೂ  370ನೇ ವಿಧಿ ರದ್ದತಿ ಅಸಂವಿಧಾನಿಕ ಹಾಗೂ ಕಾಶ್ಮೀರದ ಜನತೆಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ, ಅನ್ಯಾಯದ ಕ್ರಮವನ್ನು  ಬೆಂಬಲಿಸುವುದಿಲ್ಲ, ಕಾಶ್ಮೀರದ ಜನತೆಗೆ  ದ್ರೋಹ ಬಗೆಯುವುದಿಲ್ಲ ಎಂದು ಹೇಳಿದೆ, ಆಗ ಪ್ರತಿನಿಧಿ ‘ತೊಂದರೆಯಿಲ್ಲ' ಎಂದು ಹೇಳಿದರೂ ನಾನು ಎನ್‍ಐಎ, ಪೊಲೀಸರು  ಜಾರಿ ನಿರ್ದೇಶನಾಲಯ ಸಹಿತ ಯಾರ ವಿರುದ್ಧವೂ ಮಾತನಾಡಬಹುದು ಆದರೆ ಬಿಜೆಪಿ ಸರಕಾರ ಹಾಗೂ ಪ್ರಧಾನಿ ಮೋದಿಯ ವಿರುದ್ಧ ಮಾತನಾಡಬಾರದು ಎಂದು ಹೇಳಿದರು'' ಎಂದು ನಾಯ್ಕ್ ವಿವರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News