ಬಲ ಪ್ರಯೋಗದಿಂದ ಜನರ ಹೋರಾಟ ದಮನಿಸಲು ಸಾಧ್ಯವಿಲ್ಲ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ

Update: 2020-01-15 18:57 GMT

ಬೆಂಗಳೂರು, ಜ.15: ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿಯನ್ನು ತಂದಿರುವ ಕೇಂದ್ರ ಬಿಜೆಪಿ ಸರಕಾರ ಹಾಗೂ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕರ್ನಾಟಕದ ಬಿಜೆಪಿ ಸರಕಾರ ಜನರ ಧ್ವನಿಯನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಲು ಹೊರಟಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈಗಾಗಲೆ ಮಂಗಳೂರಿನಲ್ಲಿ ವಿನಾಕಾರಣ ಗೋಲಿಬಾರ್ ಹಾಗೂ ಲಾಠಿಚಾರ್ಜ್‌ಗಳ ಮೂಲಕ ಇಬ್ಬರ ಜೀವವನ್ನು ಬಲಿ ಪಡೆದುಕೊಂಡಿದೆ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನಾಕಾರರ ಮೇಲೆ ಕೇಸುಗಳನ್ನು ಜಡಿದು ಬಾಯಿ ಮುಚ್ಚಿಸುವ ವಿಫಲ ಪ್ರಯತ್ನಕ್ಕೆ ಇಳಿದಿದೆ ಎಂದು ಅವರು ಕಿಡಿಗಾರಿದ್ದಾರೆ.

ಮೈಸೂರಿನಲ್ಲಿ ವಿದ್ಯಾರ್ಥಿನಿಯೋರ್ವರ ಹಾಗೂ ಇತರರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿರುವುದನ್ನು ಖಂಡಿಸುವುದರೊಂದಿಗೆ ಇಂತಹ ಹತಾಶ ಪ್ರಯತ್ನಗಳು ಜನಶಕ್ತಿಯನ್ನು ದಮನಿಸಲು ಸಾಧ್ಯವಿಲ್ಲ ಎಂದು ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.

ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಸಚಿವ ಸಿ.ಟಿ.ರವಿ ನೀಡುತ್ತಿರುವ ಹೇಳಿಕೆಗಳು ದ್ವೇಷ-ಹಿಂಸೆಯನ್ನು ಹುಟ್ಟು ಹಾಕುವಂತದ್ದಾಗಿದ್ದು ರಾಜ್ಯದಲ್ಲಿ ಕಲಹಗಳಿಗೆ ಕರೆ ನೀಡುವಂತದ್ದಾಗಿದೆ. ಇಂತಹವರು ರಾಜ್ಯದ ಶಾಂತಿ, ನೆಮ್ಮದಿಗೆ ಮಾರಕರಾಗಿದ್ದಾರೆ ಎಂದು ಅವರು ದೂರಿದ್ದಾರೆ.

ನಿಜವಾಗಿಯೂ ದೇಶದ್ರೋಹದ ಕೇಸುಗಳನ್ನು ಸೋಮಶೇಖರ್ ರೆಡ್ಡಿ ಹಾಗೂ ಸಿ.ಟಿ.ರವಿಯ ಮೇಲೆ ದಾಖಲಿಸಬೇಕಾಗಿತ್ತು. ಈ ನಡುವೆ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಉತ್ತರ ಪ್ರದೇಶ ಬಿಜೆಪಿ ಮುಖಂಡ ರಘರಾಜ್ ಸಿಂಗ್ ಅತ್ಯಂತ ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ಹತ್ಯಾಕಾಂಡಗಳಿಗೆ ಕರೆ ನೀಡಿರುವುದು ಕೂಡಾ ‘ದೇಶದ್ರೋಹ’ವಾಗಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಅಸ್ವಸ್ಥ ಮನಸ್ಸುಗಳು ಇಂದು ಕಾನೂನಿನ ಭಯವಿಲ್ಲದೆ ಬಿಜೆಪಿ ಸರಕಾರದ ಅಭಯದೊಂದಿಗೆ ರಾಜಾರೋಷವಾಗಿ ಮೆರೆಯುತ್ತಿರುವುದು ದೇಶದ ದುರಂತವಾಗಿದೆ ಎಂದು ಇಲ್ಯಾಸ್ ಮುಹಮ್ಮದ್ ತಿಳಿಸಿದ್ದಾರೆ.

ಕ್ರೈಸ್ತ ಸಮುದಾಯವನ್ನು ಮತ್ತು ಯೇಸುಕ್ರಿಸ್ತರನ್ನು ನಿಂದಿಸುವ ಕಲ್ಲಡ್ಕ ಪ್ರಭಾಕರ್ ಭಟ್ ಮುಂತಾದ ಬಿಜೆಪಿ, ಆರೆಸ್ಸೆಸ್ ನಾಯಕರು ನಮ್ಮ ರಾಜ್ಯದ ಶಾಂತಿ, ಸಹಬಾಳ್ವೆ ಹಾಗೂ ಸೌಹಾರ್ದತೆಯನ್ನು ದ್ವಂಸಗೊಳಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ರಾಜ್ಯದ ಪೊಲೀಸರಿಗೆ ಹಾಗೂ ಸರಕಾರಗಳಿಗೆ ಇದು ಯಾಕೆ ಕಾಣುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಭಾಕರ್ ಭಟ್ ಮೇಲೆ ಈ ಹಿಂದೆ ಹಲವು ಬಾರಿ ಇಂತಹದೇ ಪ್ರಕರಣಗಳು ದಾಖಲಾಗಿದ್ದರೂ ಬಿಜೆಪಿ ಸರಕಾರ ಹಾಗೂ ಪೊಲೀಸರ ಸಹಕಾರದಿಂದ ಪ್ರಕರಣಗಳು ಮೂಲೆ ಗುಂಪಾಗಿರುವುದು ಈ ರೀತಿಯ ಅನಾಗರಿಕ ಹೇಳಿಕೆಗಳಿಗೆ ಪ್ರೇರಣೆಯಾಗಿದೆ ಎಂಬುವುದನ್ನು ರಾಜ್ಯದ ಜನತೆ ಚೆನ್ನಾಗಿ ತಿಳಿದಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನವಿರೋಧಿ ಕಾನೂನು ಹಾಗೂ ಸರಕಾರದ ಕ್ರಮಗಳ ವಿರುದ್ಧ ಹೋರಾಟ ನಡೆಸುವ ಜನರ ಮೇಲೆ ಕಾನೂನಿನ ದುರ್ಬಳಕೆ. ಪೊಲೀಸ್ ಬಲಪ್ರಯೋಗ, ಬೆದರಿಕೆ ಇತ್ಯಾದಿಗಳು ಜನಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಭಾರತದ ಭವಿಷ್ಯವನ್ನು ಧ್ವಂಸಗೊಳಿಸುವ ಶಕ್ತಿ ಸರಕಾರಗಳ ವಿರುದ್ಧ ಜನರ ಹೋರಾಟ ಯಶಸ್ವಿಯಾಗಲಿದೆ. ಇದು ಸಂವಿಧಾನವನ್ನು ಉಳಿಸುವ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು ಮತ್ತೊಮ್ಮೆ ಈ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜಯವಾಗಲಿದೆ ಎಂದು ಇಲ್ಯಾಸ್ ಮುಹಮ್ಮದ್ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News