ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಿಂದ ‘ಉತ್ತರ ಕೊಡಿ ಶಾ’ ಟ್ವಿಟರ್ ಅಭಿಯಾನ

Update: 2020-01-18 16:14 GMT

ಬೆಂಗಳೂರು, ಜ.18: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ‘ಉತ್ತರ ಕೊಡಿ ಶಾ’ ಅಭಿಯಾನ ಆರಂಭಿಸಿದೆ.

ಅಮಿತ್ ಶಾ ಅವರೇ, ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹಾದಾಯಿ ವಿವಾದ ಬಗೆಹರಿಯಲಿದೆ ಎಂದಿದ್ದೀರಿ. ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದೆಲ್ಲ ಕೇವಲ ಚುನಾವಣಾ ಕುತಂತ್ರವೇ? ಇನ್ನೂ ಮಹಾದಾಯಿ ವಿವಾದ ಬಗೆಹರಿಸಲಿಲ್ಲವೇಕೆ? ಉತ್ತರಕೊಡಿ ಶಾ.

ಅಮಿತ್ ಶಾ ಅವರೇ, ಭೀಕರ ನೆರೆ ಸಮೀಕ್ಷೆಗೆ ‘ಗಿಮಿಕ್ ಭೇಟಿ’ ಕೊಟ್ಟಿರಿ, ನಿಮ್ಮ ನೆರೆ ವೀಕ್ಷಣೆಯ ಫಲವೇನು? ರಾಜ್ಯಕ್ಕಾಗಿರುವ ನಷ್ಟ 35,500 ಕೋಟಿ ರೂ., ಕೇಂದ್ರ ಕೊಟ್ಟಿರುವ ಪರಿಹಾರ ಚಿಲ್ಲರೆ 1869 ಕೋಟಿ ರೂ., ರಾಜ್ಯಕ್ಕೆ ಕೇಂದ್ರದಿಂದ ಈ ರೀತಿಯ ವಂಚನೆ ಮಾಡುತ್ತಿರುವುದೇಕೆ? ಅಗತ್ಯ ನೆರೆ ಪರಿಹಾರ ಕೊಡುವುದಿಲ್ಲವೇ? ಉತ್ತರ ಕೊಡಿ ಶಾ.

ಅಮಿತ್ ಶಾ ಅವರೇ, ರಾಜ್ಯ ಬಿಜೆಪಿ ಸರಕಾರದ ಗೂಂಡಾಗಿರಿ ಮಿತಿ ಮೀರಿದೆ. ಮಂಗಳೂರು ಗೋಲಿಬಾರ್, ಇತಿಹಾಸಕಾರ ರಾಮಚಂದ್ರ ಗುಹಾರಿಗೆ ಅವಮಾನಿಸಿದ್ದು, ಜ್ಯೋತಿನಿವಾಸ್ ಕಾಲೇಜ್ ಪ್ರಕರಣ, ಶಾಸಕ ವಿಶ್ವನಾಥ್ ಕಲಾ ಸಂಸ್ಥೆಗೆ ನುಗ್ಗಿದ್ದು, ಈ ಪ್ರಕರಣಗಳು, ‘ಗುಜರಾತ್ ಮಾದರಿ’ ಅಂದರೆ ಇದೆಯೇನು? ಉತ್ತರ ಕೊಡಿ ಶಾ.

ಅಮಿತ್ ಶಾ ಅವರೇ, 5600 ಕೋಟಿ ರೂ.ಜಿಎಸ್‌ಟಿ ಬಾಕಿ, 2700 ಕೋಟಿ ರೂ.ಕುಡಿಯುವ ನೀರಿನ ಬಾಕಿ, ಭಾಗ್ಯಲಕ್ಷ್ಮಿ ಯೋಜನೆಯ 309 ಕೋಟಿ ರೂ., ಪ್ರಧಾನಮಂತ್ರಿ ಆವಾಸ್ ಯೋಜನೆಯ 240 ಕೋಟಿ ರೂ., ವಸತಿ, ಶಿಕ್ಷಣ, ಶಿಶು ಅಭಿವೃದ್ಧಿ ಮುಂತಾದ ಯೋಜನೆಗಳ ಹಣವನ್ನು ಬಿಡುಗಡೆಗೊಳಿಸದೆ ಕೇಂದ್ರವು ಕರ್ನಾಟಕಕ್ಕೆ ವಂಚಿಸುತ್ತಿರುವುದೇಕೆ? ಉತ್ತರ ಕೊಡಿ ಶಾ.

ಭಯೋತ್ಪಾದಕ ದಾವಿಂದರ್ ಸಿಂಗ್ ಬಗ್ಗೆ ನಿಮ್ಮ ಹಾಗೂ ಪ್ರಧಾನಮಂತ್ರಿಯ ಮೌನವೇಕೆ? ಪುಲ್ವಾಮಾ ದಾಳಿಯಲ್ಲಿ ದಾವಿಂದರ್ ಸಿಂಗ್ ಪಾತ್ರವೇನು? ಈತ ಇನ್ನೂ ಅದೆಷ್ಟು ಉಗ್ರರ ಜೊತೆ ಕೈ ಜೋಡಿಸಿದ್ದಾನೆ? ಈತನ ರಕ್ಷಣೆಗೆ ನಿಂತವರು ಯಾರು ಏಕೆ? ದೇಶದ ಭದ್ರತೆಯ ಗಂಭೀರ ವಿಷಯದಲ್ಲಿ ಜನರಿಂದ ನೀವು ಏನನ್ನು ಮುಚ್ಚಿಡುತ್ತೀರಿ? ಉತ್ತರ ಕೊಡಿ ಶಾ.

ಅಮಿತ್ ಶಾ ಅವರೇ, ಪೌರತ್ವ ತಿದ್ದುಪಡಿಯು ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. 1955ರ ಕಾಯ್ದೆಯು ಪೌರತ್ವ ಮತ್ತು ಆಶ್ರಯ ನೀಡುವುದರಲ್ಲಿ ಧಾರ್ಮಿಕ ತಾರತಮ್ಯ ಮಾಡುವುದಿಲ್ಲ. 2019ರ ತಿದ್ದುಪಡಿಯು ತಾರತಮ್ಯದಿಂದ ಕೂಡಿದ್ದು ಪರಿಚ್ಛೇದ 14ರ ವಿರುದ್ಧವಾಗಿದೆ. ಸಂವಿಧಾನದ ಜೊತೆ ಚೆಲ್ಲಾಟವೇಕೆ? ಉತ್ತರ ಕೊಡಿ ಶಾ.

ಅಮಿತ್ ಶಾ ಅವರೇ, ಸಿಎಎ/ಎನ್‌ಆರ್‌ಸಿ ವಿರೋಧಿಸಿ ದೇಶಾದ್ಯಂತ 1 ತಿಂಗಳಿನಿಂದ ನಿರಂತರವಾಗಿ, ಎಲ್ಲ ಜಾತಿ-ಧರ್ಮಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಜನಾಭಿಪ್ರಾಯದ ವಿರುದ್ಧ ಸರ್ವಾಧಿಕಾರಿ ಧೋರಣೆ ಏಕೆ? ಬಿಜೆಪಿಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುತ್ತಿಲ್ಲವೇಕೆ? ಉತ್ತರ ಕೊಡಿ ಶಾ.

ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರಕಾರವು ಟೇಕ್ ಆಫ್ ಆಗಿಲ್ಲ. ಬಿಜೆಪಿ ಆರೆಸೆಸ್ಸ್ ಕಿತ್ತಾಟ, ಮಂತ್ರಿಮಂಡಲ ರಚನೆಗೆ ನಿಮ್ಮ ತಡೆ ಮತ್ತು ದಬ್ಬಾಳಿಕೆ, ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ಹೊಂದಾಣಿಕೆ ಕೊರತೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಗೊಳಿಸಿರುವುದೇಕೆ? ಉತ್ತರ ಕೊಡಿ ಶಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News