ಗಡಿ, ಭಾಷೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ವಿ.ಎಸ್.ಉಗ್ರಪ್ಪ
Update: 2020-01-19 14:59 GMT
ಬೆಂಗಳೂರು, ಜ.19: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗವಾಗಿರುವುದರಿಂದ ಮಹಾರಾಷ್ಟ್ರ ನಾಯಕರು ಬೆಳಗಾವಿ ವಿಷಯದ ಕುರಿತು ಮಾತನಾಡುವುದಕ್ಕೆ ಹೋಗಬಾರದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಿಷಯ ಮುಗಿದು ಹೋದ ಅಧ್ಯಾಯ ಆಗಿದೆ. ಮಹಾರಾಷ್ಟ್ರ ನಾಯಕರು ಪದೇ ಪದೇ ಆ ವಿಷಯವನ್ನು ಪ್ರಸ್ತಾವಿಸುವುದನ್ನು ನಿಲ್ಲಿಸಬೇಕು. ಅನಗತ್ಯ ಹೇಳಿಕೆಗಳಿಂದ ಜನರನ್ನು ದಾರಿ ತಪ್ಪಿಸುವುದು ಬೇಡ ಎಂದರು.
ಕಾಂಗ್ರೆಸ್ ಬೆಳಗಾವಿ ವಿಷಯದಲ್ಲಿ ಯಾವತ್ತಿಗೂ ರಾಜಕೀಯ ಮಾಡಿಲ್ಲ, ಮಾಡುವುದು ಇಲ್ಲ. ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಇರಬಹುದು. ಆದರೆ, ಕರ್ನಾಟಕ ಗಡಿ, ಭಾಷೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟ ಪಡಿಸಿದರು.