ಕನ್ನಡ ಕಾವ್ಯದ ‘ಮೊಗಸಾಲೆ’ಯಲ್ಲಿ....

Update: 2020-01-19 18:29 GMT

ನಾ.ಮೊಗಸಾಲೆ ಹೆಸರಿಗೆ ತಕ್ಕಂತೆಯೇ ಮೊಗಸಾಲೆಯೇ ಸರಿ. ಸಾಹಿತ್ಯದ ಮನೆಯ ಮೊಗಸಾಲೆ ಅವರು. ಆ ಮೊಗಸಾಲೆಯ ಮೂಲಕ ಹತ್ತು ಹಲವು ಪ್ರತಿಭೆಗಳು ಅರಳಿವೆ. ನಾಡಿನ ಪ್ರತಿಷ್ಠಿತ ಪ್ರಶಸ್ತಿ ‘ಮುದ್ದಣ ಕಾವ್ಯ ಪ್ರಶಸ್ತಿ’ಯ ಹಿಂದೆ ಇವರಿದ್ದಾರೆ. ಈ ಪ್ರಶಸ್ತಿಯ ಮೂಲಕ ಹೊರಹೊಮ್ಮಿದ ಹಲವಾರು ಪ್ರತಿಭಾವಂತ ಕವಿಗಳಿದ್ದಾರೆ. ಸ್ವತಃ ಸಾಹಿತಿಯಾಗಿ ಸೃಜನಶೀಲ ಬರಹಗಳನ್ನು ಬರೆಯುತ್ತಾ, ಸಾಹಿತ್ಯಕವಾದ ಚಟುವಟಿಕೆಗಳಿಗೆ ತಮ್ಮನ್ನು ತಾವು ಮೊಗಸಾಲೆಯಾಗಿ ಪರಿವರ್ತಿಸಿಕೊಂಡ ಇವರ ಬದುಕಿನ ಬೇರೆ ಬೇರೆ ಮಗ್ಗುಲುಗಳ ಕಡೆಗೆ ಬೆಳಕು ಚೆಲ್ಲುವ ಕೃತಿ ‘ಮೊಗಸಾಲೆ-ಎಪ್ಪತ್ತೈದರ ಹೊತ್ತಿಗೆ’. ಹಿರಿಯ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಈ ಕೃತಿಯನ್ನು ಸಂಪಾದಿಸಿದ್ದಾರೆ. ಮೊಗಸಾಲೆಯವರ ಕುರಿತಂತೆ ನಾಡಿನ ಹಿರಿಯ ಚಿಂತಕರು, ಸಾಹಿತಿಗಳು ಇಲ್ಲಿ ಬರೆದಿದ್ದಾರೆ. ಅವರ ಸಾಹಿತ್ಯ, ಬರಹ, ಚಿಂತನೆ, ಚಟುವಟಿಕೆಗಳನ್ನು ವಿವರವಾಗಿ ನೀಡಿದ್ದಾರೆ.

  ಕೃತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಮೊಗಸಾಲೆ ಅವರ ಚಟುವಟಿಕೆಗಳ ಬಹು ವಿಸ್ತಾರವಾದ ವಿವಿಧ ಕ್ಷೇತ್ರಗಳನ್ನು ಪರಿಚಯಿಸಲು ಈ ವಿಂಗಡನೆ ಅನುಕೂಲವಾಗಿದೆ. ನುಡಿ ಹೆಜ್ಜೆ ವಿಭಾಗದಲ್ಲಿ ಡಾ. ಪುಂಡಿಕಾಯ್ ಗಣಪಯ್ಯ ಭಟ್, ಬಸವರಾಜ ಕಲ್ಗುಡಿ, ಬೆಳಗೋಡು ರಮೇಶ ಭಟ್, ಅಂಶುಮಾಲಿ, ತಾಳ್ತಜೆ ವಸಂತ ಕುಮಾರ್, ಡಾ. ಆಶಾದೇವಿ, ಉಪೇಂದ್ರ ಸೋಮಯಾಜಿ, ಸುಬ್ರಾಯ ಚೊಕ್ಕಾಡಿಯಂತಹ ಹಿರಿಯರು ಬರೆದಿದ್ದಾರೆ. ಅವರ ಕಥನ ಲೋಕ, ಸಾಹಿತ್ಯ ಪ್ರಸ್ತುತತೆ, ಕಾದಂಬರಿ ಲೋಕ, ಕಾವ್ಯ ಲೋಕ, ಸಣ್ಣ ಕತೆಗಳು ಇತ್ಯಾದಿಗಳ ಬಗ್ಗೆ ಇಲ್ಲಿ ವಿವರವಾದ ಬರಹಗಳಿವೆ. ‘ಕನ್ನಡದ ವಿಶಿಷ್ಟ ಲೌಕಿಕ ಕಥನಕಾರ ಮೊಗಸಾಲೆ’, ‘ಮೊಗಸಾಲೆ-ವಾಮನನಿಂದ ತ್ರಿವಿಕ್ರಮ’, ‘ಮೊಗಸಾಲೆಯವರ ಕಾದಂಬರಿಗಳು’, ‘ಅಸ್ಮಿತೆಯ ಶೋಧದ ಬಯಲ ಬೆಟ್ಟ’ ಮೊದಾದ ಬರಹಗಳು ಗಮನಾರ್ಹವಾಗಿವೆ.

 ‘ಸಂಘ ಜಂಗಮ’ ವಿಭಾಗದಲ್ಲಿ ಸಂಘಟಕರಾಗಿ ಅವರು ಕಾಂತಾವರವನ್ನು ರಾಜ್ಯಮಟ್ಟಕ್ಕೆ ತಲುಪಿಸಿದ ಪರಿಯನ್ನು ವಿವಿಧ ಲೇಖಕರು ವಿವರಿಸಿದ್ದಾರೆ. ಹೇಗೆ ಒಂದು ಮರವಾಗಿ ಅವರು ಕನ್ನಡದ ಸೃಜನಶೀಲ ಹಕ್ಕಿಗಳಿಗೆ ಆಶ್ರಯ ನೀಡಿದರು ಎನ್ನುವುದನ್ನು ಈ ಭಾಗ ವಿವರಿಸುತ್ತದೆ. ‘ನಡೆಗೆಜ್ಜೆ’ ಭಾಗದಲ್ಲಿ ಮೊಗಸಾಲೆಯವರ ಸಾಹಿತ್ಯ ವಿಹಾರ ಸರಣಿ ಕಾರ್ಯಕ್ರಮಗಳ ಸಚಿತ್ರ ವರದಿಗಳಿವೆ. ಕನ್ನಡ ಸಂಘ ಕಾಂತಾವರ ಈ ಕೃತಿಯನ್ನು ಬೆಳಕಿಗೆ ತಂದಿದೆ. 388 ಪುಟಗಳ ಈ ಕೃತಿಯ ಮುಖಬೆಲೆ 400 ರೂಪಾಯಿ. ಆಸಕ್ತರು 99007 01666 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News