'ಫ್ರೀ ಕಾಶ್ಮೀರ್' ವಿಚಾರಣೆ ಜ.24ಕ್ಕೆ ಮುಂದೂಡಿಕೆ: ಯುವತಿ ಪರ ವಕಾಲತ್ತು ವಹಿಸಿದ ವಕೀಲರು

Update: 2020-01-20 18:33 GMT

ಮೈಸೂರು,ಜ.20: ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಹಾಗೂ ಆಯೋಜಕ ಮರಿದೇವಯ್ಯ ಪರ ಬೆಂಗಳೂರು ಹಾಗೂ ಮೈಸೂರು ವಕೀಲರು ವಕಾಲತ್ತು ವಹಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಜ.24ಕ್ಕೆ ವಿಚಾರಣೆ ಮುಂದೂಡಿದೆ. 

ಪ್ರಕರಣದ ಬಳಿಕ ಮೈಸೂರಿನ ವಕೀಲರ ಸಂಘ ನಳಿನಿ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿತ್ತು. ಹೀಗಾಗಿ ನಳಿನಿಗೆ ಜಾಮೀನು ಸಿಕ್ಕಿರಲಿಲ್ಲ. ಸೋಮವಾರ ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಿಂದ ಬಂದ ವಕೀಲ ದ್ವಾರಕನಾಥ್ ಮತ್ತು ತಂಡ ನಳಿನಿ ಪರ ವಕಾಲತ್ತು ವಹಿಸಿ 129 ವಕೀಲರ ಸಹಿ ಇರುವ ಅರ್ಜಿಯನ್ನು ಕೋರ್ಟ್‍ಗೆ ಸಲ್ಲಿಸಿತು. ವಕಾಲತ್ತು ಸ್ವೀಕರಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ವಿಚಾರಣೆಯನ್ನು ಜ.24ಕ್ಕೆ ಮುಂದೂಡಿದೆ. 

ಈ ಬಗ್ಗೆ ಮಾತನಾಡಿದ ನಳಿನಿ ಪರ ವಕೀಲ ಜಗದೀಶ್, ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಪ್ರಕರಣವನ್ನು ಪರಿಶೀಲನೆ ಮಾಡಿದ ಬಳಿಕವಷ್ಟೇ ಸತ್ಯ ತಿಳಿಯಲಿದೆ. ಈ ಪ್ರಕರಣ ಸಂಬಂಧ ವಕಾಲತ್ತು ವಹಿಸದಿದ್ದರೆ ಪ್ರಕರಣ ಇಲ್ಲಿಗೆ ನಿಲ್ಲುತ್ತದೆ. ಹೀಗಾಗಿ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ. ನಂತರ ಸತ್ಯಾಸತ್ಯತೆ ತಿಳಿಯಲಿದೆ. ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಲಿ. ತಪ್ಪಿತಸ್ಥರಲ್ಲದಿದ್ದರೆ ಅವರಿಗೆ ನ್ಯಾಯ ಸಿಗಲಿ. ಈ ವಿಚಾರದಲ್ಲಿ ಮೈಸೂರು ವಕೀಲರ ಸಂಘದ ನಿರ್ಧಾರ ಅವರಿಗೆ ಬಿಟ್ಟದ್ದು. ಮೈಸೂರು ವಕೀಲರು ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಮೈಸೂರು ವಕೀಲರಿಂದಲೂ ವಕಾಲತ್ತು: ಒಂದೆಡೆ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಿದ್ದರೆ ಮತ್ತೊಂದೆಡೆ ಮೈಸೂರಿನ ವಕೀಲರ ತಂಡವೂ ವಕಾಲತ್ತು ವಹಿಸಿದೆ. ಸಂಘದ ನಿರ್ಣಯದ ವಿರುದ್ಧವೇ ನಿಂತಿರುವ ಸುಮಾರು 150 ವಕೀಲರು ನಳಿನಿ ಪರ ವಕಾಲತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನಿರ್ಣಯ ಮರುಪರಿಶೀಲನೆ ಮಾಡುವಂತೆ ಮೈಸೂರಿನ ವಕೀಲರು ಅರ್ಜಿ ಸಲ್ಲಿಸಿದ್ದಾರೆ. 

ಈ ಕುರಿತು ವಕೀಲೆ ಮಂಜುಳಾ ಮಾನಸ ಮಾತನಾಡಿ, ಸಂಘದ ನಿರ್ಣಯ ಉಲ್ಲಂಘಿಸಿದರೆ ಏನು ಮಾಡುತ್ತೇವೆಂದು ಅವರು ಹೇಳಿಲ್ಲ. ವೃತ್ತಿ ಧರ್ಮದ ದೃಷ್ಠಿಯಿಂದ ವಕಾಲತ್ತು ವಹಿಸಲು ನಿರ್ಧರಿಸಿದ್ದೇವೆ. ನಮ್ಮ ವಿರುದ್ಧ ಕ್ರಮ ಕೈಗೊಂಡರೆ ಅದು ಏಕಪಕ್ಷಿಯ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ವಕೀಲರ ಸಂಘದಿಂದ ವಕಾಲತ್ತಿಲ್ಲ: ಈ ನಡುವೆ ಮತ್ತೆ ಸಭೆ ನಡೆಸಿರುವ ಮೈಸೂರು ವಕೀಲರ ಸಂಘ ನಳಿನಿ ಪರ ವಕಾಲತ್ತು ವಹಿಸದಂತೆ ಕೈಗೊಂಡಿದ್ದ ನಿರ್ಧಾರಕ್ಕೆ ಬದ್ಧವಾಗಿದೆ. ಸೋಮವಾರ ಮತ್ತೆ ಸರ್ವ ಸದಸ್ಯರ ಸಭೆ ನಡೆಸಿದ ಸಂಘ ವಕಾಲತ್ತು ವಹಿಸದಿರುವ ಸಂಘದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಿಳಿಸಿತು. ಎಲ್ಲಾ ಹಿತಗಳಿಗಿಂತ ದೇಶದ ಭದ್ರತೆ ಹಿತಾಸಕ್ತಿ ಮುಖ್ಯ. ದೇಶದ್ರೋಹದ ಆರೋಪದ ಪರ ವಕಾಲತ್ತು ವಹಿಸುವುದು ಸಂಘದ ಗೌರವಕ್ಕೆ ತರವಲ್ಲ. ಸಂಘದ ಗೌರವ, ಘನತೆಯ ದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊರಗಿನಿಂದ ಬಂದ ವಕೀಲರಿಗೂ ಈ ಬಗ್ಗೆ ಮನವಿ ಮಾಡಲು ಮೈಸೂರು ಜಿಲ್ಲಾ ವಕೀಲರ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News