ಕಾರವಾರ: ರಸ್ತೆ ಅಪಘಾತಕ್ಕೆ ಬೈಕ್ ಸವಾರರಿಬ್ಬರು ಬಲಿ
Update: 2020-01-24 13:13 GMT
ಕಾರವಾರ: ಸರಕಾರಿ ಬಸ್ ಅನ್ನು ಓವರ್ ಟೇಕ್ ಮಾಡಲು ಯತ್ನಿಸಿದಾಗ ಬೈಕ್ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಳಿಯಾಳದಲ್ಲಿ ಶುಕ್ರವಾರ ನಡೆದಿದೆ.
ಹಳಿಯಾಳ ಪಟ್ಟಣದ ಇಂಜಿನಿಯರಿಂಗ್ ಕಾಲೇಜ್ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಮಂಜುನಾಥ ಮುನ್ನಪ್ಪ ಮಿರಾಶಿ(23) ಹಾಗೂ ಶಿವಾಜಿ ರಾಮಚಂದ್ರ ಮಿರಾಶಿ(22) ಎನ್ನುವ ಯುವಕರು ಮೃತಪಟ್ಟಿದ್ದಾರೆ.
ಮೃತರು ಹಳಿಯಾಳ ತಾಲೂಕಿನ ತಟ್ಟಿಗೆರೆ ಗ್ರಾಮದ ನಿವಾಸಿಯಾಗಿದ್ದು, ದಾಂಡೇಲಿಯಿಂದ ಹಳಿಯಾಳಕ್ಕೆ ವಾಪಸ್ಸಾಗುತ್ತಿದ್ದಾಗ ಎದುರು ಸಾಗುತ್ತಿದ್ದ ಬಸ್ ಅನ್ನು ಓವರ್ ಟೇಕ್ ಮಾಡಲು ವೇಗವಾಗಿ ಬೈಕ್ ಚಲಾಯಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಯಂತ್ರಣ ತಪ್ಪಿ ಅದೇ ಬಸ್ಸಿಗೆ ಢಿಕ್ಕಿ ಹೊಡೆದಿದ್ದರಿಂದ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.