ಬಿಎಸ್ ವೈ 'ಹೆಲ್ಪ್ ಲೆಸ್ ಸಿಎಂ': ಪ್ರಿಯಾಂಕ್ ಖರ್ಗೆ

Update: 2020-01-26 12:31 GMT

ಕಲಬುರಗಿ: ಬಿ.ಎಸ್.ಯಡಿಯೂರಪ್ಪ 'ಹೆಲ್ಪ್ ಲೆಸ್' ಸಿಎಂ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದ ಸರಕಾರಿ ಶಾಲೆ ಕಂಪೌಂಡ್, ಶುದ್ದ ಕುಡಿಯುವ ನೀರಿನ ಘಟಕ, ಗಂಡು ಮತ್ತು ಹೆಣ್ಣುಮಕ್ಕಳ ಶೌಚಾಲಯ ಹಾಗೂ ಇತರೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ತುಂಬಾ ಕಷ್ಟಪಟ್ಟು ಬೇರೆ ಪಕ್ಷದ ಶಾಸಕ- ಸಚಿವರನ್ನು ರಾಜೀನಾಮೆ ಕೊಡಿಸಿ ನೂರಾರು ಕೋಟಿ ಖರ್ಚು ಮಾಡಿ ಸಿಎಂ ಆದ ಯಡಿಯೂರಪ್ಪನವರು ತುಂಬಾ ಅಸಹಾಯಕರಾಗಿದ್ದಾರೆ. ಮೋದಿ ಮತ್ತು ಅಮಿತ್ ಶಾ ಸಿಎಂ ಗೆ ಟೈಮ್ ಕೊಡುತ್ತಿಲ್ಲ. ಗೆದ್ದು ಬಂದ ಶಾಸಕರು ಮಂತ್ರಿಗಿರಿಗಾಗಿ ಕಾಯುತ್ತಿದ್ದಾರೆ. ಅವರಿಗೆ ಏನೂ ಸಹಾಯ ಮಾಡದೆ ಸಿಎಂ 'ಹೆಲ್ಪ್ ಲೆಸ್' ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕರಿಗೆ ಮಂತ್ರಿ ಮಾಡ್ತಾರೋ ಬಿಡ್ತಾರೋ ಅದಕ್ಕಿಂತ ಮುಖ್ಯವಾಗಿ ಈ ರಾಜ್ಯದ ರೈತರು ಹಾಗೂ ಸಾರ್ವಜನಿಕರು ಭೀಕರ ನೆರೆಹಾವಳಿಗೆ ಕೋಟ್ಯಾಂತರ ಮೌಲ್ಯದ ಬೆಳೆ ಹಾನಿ, ಆಸ್ತಿ ಪಾಸ್ತಿ ಕಳೆದುಕೊಂಡಿದ್ದರು. ಅವರಿಗೆ ಸಹಾಯ ಮಾಡದ ಸ್ಥಿತಿಯಲ್ಲಿರುವ ಯಡಿಯೂರಪ್ಪ ನಿಜಕ್ಕೂ 'ಹೆಲ್ಪ್ ಲೆಸ್' ಸಿಎಂ ಎಂದು ಶಾಸಕರು ಟೀಕಿಸಿದರು.

ಕಲ್ಯಾಣ ಕರ್ನಾಟಕ ಹೆಸರು ಬದಲಾಯಿಸಿದ ತಕ್ಷಣ ಈ ಭಾಗಕ್ಕೆ ವಾರ್ಷಿಕ ರೂ. 1500 ಕೋಟಿಗೆ ಬದಲು ರೂ. 2500 ಕೋಟಿ ಕೊಟ್ಟಿದ್ದರೆ ಇವರಿಗೆ ಜನರ ಕಾಳಜಿ ಇದೆ ಎಂದು ಹೇಳಬಹುದಿತ್ತು. ಚಿತ್ತಾಪುರ ಕ್ಷೇತ್ರದ ಅಭಿವೃದ್ದಿ ನನ್ನ ಬದ್ದತೆ ಅದರಂತೆ ನೀವು ಕೂಡಾ ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಬದ್ದತೆ ಸಾಬೀತುಪಡಿಸಿ ಎಂದು ಸಿಎಂ ಗೆ ಸವಾಲು ಹಾಕಿದರು.

ಕೇಂದ್ರ ಹಾಗೂ ರಾಜ್ಯ ಸರಕಾರ ರಾಜ್ಯದ ಜನರಲ್ಲದೇ ಕಲ್ಯಾಣ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದರು ಕೂಡಾ ಜಿಲ್ಲೆಯ ಶಾಸಕರು ತಮ್ಮ ನಾಯಕರ ಮುಂದೆ ಸಮಸ್ಯೆ ಬಿಚ್ಚಿಡಲು ಆಗದೆ ಬರೀ ಭಾಷಣ ಬಿಗಿಯುತ್ತಾರೆ ಎಂದು ಬಿಜೆಪಿ ನಾಯಕರಿಗೆ ಮಾತಿನಲ್ಲೇ  ತಿವಿದರು.

ಕೇವಲ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ದಿಶಾ ಮೀಟಿಂಗ್ ನಲ್ಲಿ ಕಲಬುರಗಿ ಎಂಪಿ ಇನ್ನೆರಡು ವರ್ಷ ರಸ್ತೆಗಳ ಅಭಿವೃದ್ದಿಗೆ ಕೇಂದ್ರ ಅನುದಾನ ನೀಡುವುದಿಲ್ಲ ಎನ್ನುತ್ತಾರೆ. ಇದನ್ನು ಹೇಳೋದಕ್ಕಾ ನಿಮ್ಮನ್ನು ಜನ ಎಂಪಿಯನ್ನಾಗಿ ಆಯ್ಕೆ ಮಾಡಿದ್ದಾ? ಎಂದು ಟೀಕಿಸಿದರು.

ವೇದಿಕೆಯಲ್ಲಿ ಶ್ರೀನಿವಾಸ ಸಗರ, ಭೀಮಣ್ಣ ಸಾಲಿ, ಜಗನಗೌಡ ಪೊಲೀಸ್ ಪಾಟೀಲ್, ಅಜೀಜ್ ಸೇಠ್ ಸೇರಿದಂತೆ ಮತ್ತಿತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News