ದೇಶ, ರಾಜ್ಯಗಳು ಸಾಕಷ್ಟು ಪ್ರಗತಿ ಸಾಧಿಸಿವೆ: ಸಚಿವ ಜೆ.ಸಿ.ಮಾಧುಸ್ವಾಮಿ

Update: 2020-01-26 15:51 GMT

ತುಮಕೂರು, ಜ. 26: ಸಂವಿಧಾನ ಜಾರಿಗೆ ಬಂದ ನಂತರ ದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. 

ಜಿಲ್ಲಾಡಳಿತದ ವತಿಯಿಂದ ನಗರದ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 71ನೇ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತಿದ್ದ ಅವರು,ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಪ್ರಪಂಚದಲ್ಲಿ ಉತ್ಕøಷ್ಟ ಮಟ್ಟದ ಸಂವಿಧಾನವನ್ನು ನೀಡಿದ್ದಾರೆ.  ಅಲ್ಲದೆ ಸಂವಿಧಾನ ಕತೃಗಳು ಈ ದೇಶದ ಜನರ ಬದುಕು,ಜೀವನದ ಬದಲಾವಣೆಗೆ ತಕ್ಕಂತೆ ಕಾನೂನುಗಳನ್ನು ಬದಲಾಯಿಸುವ ಬಹುದೊಡ್ಡ ಅವಕಾಶವನ್ನು ನೀಡಿದ್ದಾರೆ ಎಂದು ವಿಶ್ಲೇಷಿಸಿದರು. 

ದೇಶದಲ್ಲಿ ಬೇಕಾದಷ್ಟು ಧರ್ಮಗಳು, ಭಾಷೆಗಳು, ಪ್ರಾಂತ್ಯಗಳು ಇದ್ದರೂ ಜನರು ನೆಮ್ಮದಿಯಾಗಿ ಬದುಕುವ ಸ್ಥಿತಿ ಹಾಗೂ ಸಮಾಜವಾದ, ಸಮತಾವಾದ ಹಾಗೂ ಅಶಕ್ತರನ್ನು ಶಕ್ತರನ್ನಾಗಿಸುವ ಹಾಗೂ ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿ ತಿಳಿಸಲಾಗಿದೆ.ಸ್ವಾತಂತ್ರ್ಯ ನಂತರ ದೇಶದಲ್ಲಿ ಆಹಾರದ ಕೊರತೆ ಇಲ್ಲ.ಆಹಾರ ಭದ್ರತೆ ಕಾಯ್ದೆಯನ್ವಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆಹಾರವನ್ನು ಪಡೆಯುತ್ತಿವೆ.ಕಡ್ಡಾಯ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತಂದು ಉಚಿತವಾಗಿ 0-14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.ಇದರಿಂದಾಗಿ ಶೇ.30ರಷ್ಟಿದ್ದ ಸಾಕ್ಷರತಾ ಪ್ರಮಾಣ 80% ರಷ್ಟರವರೆಗೆ ಏರಿಕೆಯಾಗಿ ಆ ಮೂಲಕ ಮುಖ್ಯವಾಹಿನಿಗೆ ತರಲು ಸಾಧ್ಯವಾಗಿದೆ ಎಂದರು ಅವರು ತಿಳಿಸಿದರು. 

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು,ಸ್ವಾತಂತ್ರ್ಯ ನಂತರ ದೇಶ ರಕ್ಷಣಾ ಶಕ್ತಿಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದೆ.ವೈಜ್ಞಾನಿಕ ಸಂಶೋಧನೆಯಲ್ಲೂ ಭಾರತ ಮುಂದಿದೆ ಎಂದು ಅವರು ತಿಳಿಸಿದರು. 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ವಾಣಿಜ್ಯ ಮಳಿಗೆ/ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ರಕ್ಷಣೆ ಒದಗಿಸಲು ನಿಯಮ ಜಾರಿಗೆ ತರಲಾಗಿದೆ.ಸರಕಾರದ ವೃತ್ತಿಪರ ಹುದ್ದೆಗಳ ನೇಮಕಾತಿಯಲ್ಲಿ ಸಂದರ್ಶನ ನಡೆಸುವುದನ್ನು ರದ್ದುಗೊಳಿಸಿ,ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡುವುದನ್ನು ಜಾರಿಗೆ ತರಲಾಗಿದೆ ಎಂದು ನುಡಿದರು. 

ಅಂತರ್ಜಲ ಮಟ್ಟ ಹೆಚ್ಚಿಸಲು ತುಮಕೂರು ಜಿಲ್ಲೆಯ 7 ತಾಲೂಕು ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಅಟಲ್ ಭೂ ಜಲ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.ಇದಕ್ಕಾಗಿ ಕೇಂದ್ರ ಸರಕಾರದಿಂದ 1201 ಕೋಟಿ ರೂ. ಅನುದಾನ ಬರಲಿದೆ. 
ಕಾನೂನು, ಶಿಸ್ತು, ಉತ್ತಮ ಆಡಳಿತ ಪಾಲನೆ ಇದ್ದರೆ, ಸಂಘರ್ಷವನ್ನು ತಡೆಯಬಹುದಾಗಿದೆ.ಅದರಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಹೇಮಾವತಿಯಿಂದ ಈ ಭಾರಿ ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಿಗೆ ನೀರು ಹರಿಸಲಾಗಿದೆ.  ತುಮಕೂರು ಜಿಲ್ಲೆಗೆ ಈ ಬಾರಿ ಕುಡಿಯುವ ನೀರಿಗಾಗಿ ಕೆರೆಗಳಿಗೆ 18.8 ಟಿಎಂಸಿ ನೀರನ್ನು ಹರಿಸಲಾಗಿದೆ.ಇನ್ನೂ 6 ರಿಂದ 7 ಟಿಎಂಸಿ ಉಳಿತಾಯವಾಗಿದೆ.ನೀರಿನ ಸಮಸ್ಯೆಯಾದರೆ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮತ್ತೆ ನೀರನ್ನು ಹರಿಸಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು. 

ಹೇಮಾವತಿ ತುಮಕೂರು ನಾಲೆ 0-70 ಕಿ.ಮೀ. ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಈಗಿನ ಎರಡರಷ್ಟು ನೀರನ್ನು ಪಡೆಯಬಹುದಾಗಿದೆ.ಅಲ್ಲದೆ ಪ್ರಧಾನಮಂತ್ರಿಗಳು ಕರೆ ಕೊಟ್ಟಿರುವಂತೆ ನಗರ ಹಾಗೂ ಪಟ್ಟಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ,ಉತ್ತಮ ಆರೋಗ್ಯವನ್ನು ಪಡೆಯುವ ಕಡೆ ಜನರು ಮುಂದಾಗಬೇಕು. 
ಸ್ವಾತಂತ್ರ್ಯ ನಂತರ ರಾಷ್ಟ್ರ ಹಾಗೂ ರಾಜ್ಯವು ಕೈಗಾರಿಕೆ, ಸಾರಿಗೆ, ಕೃಷಿ, ರಸ್ತೆ, ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. 

ಸಮಾರಂಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕಾಂತರಾಜ್ ಬಿಎಂಎಲ್, ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮೇಯರ್ ಲಲಿತ ರವೀಶ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಎಸ್‍ಪಿ ಡಾ: ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಪಾಲಿಕೆ ಆಯುಕ್ತ ಭೂಬಾಲನ್, ಮತ್ತಿತರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 

ಕಾರ್ಯಕ್ರಮದಲ್ಲಿ ತುಮಕೂರು ನಗರದ ವಿವಿಧ ಕಾಲೇಜು ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಪೊಲೀಸ್, ಎನ್‍ಸಿಸಿ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಕವಾಯಿತು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News