ಭೇದ ಭಾವವಿಲ್ಲದೆ ಸಮಗ್ರ ಅಭಿವೃದ್ಧಿಗೆ ಕೈಜೊಡಿಸೋಣ: ಡಿಸಿ ಅನೀಸ್ ಕರೆ

Update: 2020-01-26 17:51 GMT

 ಮಡಿಕೇರಿ, ಜ.26: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಅಡಿಗಲ್ಲಿನ ಮೇಲೆ ಪ್ರಜಾಸತ್ತಾತ್ಮಕ ಗಣರಾಜ್ಯದ ಕಲ್ಪನೆಯನ್ನು ಅರ್ಥೈಸಿಕೊಳ್ಳುವುದರೊಂದಿಗೆ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ನೀತಿಯೊಂದಿಗೆ ಯಾವುದೇ ಭೇದ ಭಾವವಿಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೊಡಿಸಬೇಕೆಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

 ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಕಟಿಬದ್ಧವಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿನ ಪುನರ್ ನಿರ್ಮಾಣಕ್ಕಾಗಿ ಜಿಲ್ಲೆಗೆ ಈಗಾಗಲೇ 100 ಕೋಟಿ ರೂ.ಯ ವಿಶೇಷ ಪ್ಯಾಕೇಜ್‌ನ್ನು ಬಿಡುಗಡೆ ಮಾಡಿದೆ. ವಿವಿಧ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.

 ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈಗಾಗಲೇ ಕರ್ಣಂಗೇರಿಯಲ್ಲಿ ಮನೆ ವಿತರಿಸಲಾಗಿದ್ದು, ಮದೆ ಗ್ರಾಮದಲ್ಲಿ ಮನೆ ನಿರ್ಮಾಣ ಕಾರ್ಯಪೂರ್ಣಗೊಂಡು ಫಲಾನುಭವಿಗಳಿಗೆ ವಿತರಿಸಲಷ್ಟೇ ಬಾಕಿ ಉಳಿದಿದೆ. ಜಂಬೂರು, ಕೆ.ನಿಡುಗಣೆ, ಬಿಳಿಗೇರಿ ಗ್ರಾಮಗಳಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅಭ್ಯತ್‌ಮಂಗಲ ಗ್ರಾಮದಲ್ಲಿ ನಿವೇಶನ ನೀಡಲು ಜಮೀನು ಗುರುತಿಸಿ, ಹಂಚಿಕೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಸುಮಾರು 35 ಸಾವಿರ ರೈತರಿಗೆ 95 ಕೋಟಿ ರೂ. ಬೆಳೆ ಪರಿಹಾರವನ್ನು ಪಾವತಿಸಲಾಗಿದ್ದು, ಸರಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಕೊಡಗನ್ನು ಸಹಜ ಸ್ಥಿತಿಗೆ ತರುವ ಸರ್ವ ಪ್ರಯತ್ನಗಳೂ ನಡೆದಿವೆ. ಇಂತಹ ಸಂದರ್ಭದಲ್ಲಿ ಈ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಮಹಾನ್ ನಾಯಕರನ್ನು ಸ್ಮರಿಸುತ್ತಾ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿದ್ದ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟು ಚಿಕ್ಕಪುಟ್ಟ ಸಂಸ್ಥಾನಗಳಾಗಿ ತಮ್ಮದೇ ಆದ ವೈಶಿಷ್ಟ್ಯವನ್ನು ಒಳಗೊಂಡಿದ್ದ ಪ್ರಾಂತ್ಯಗಳೆಲ್ಲವನ್ನೂ ಸ್ವಾತಂತ್ರ್ಯ ನಂತರದಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲರ ನೇತೃತ್ವದಲ್ಲಿ ಒಗ್ಗೂಡಿಸಿ ಒಂದೇ ಆಡಳಿತ ವ್ಯವಸ್ಥೆಯೊಳಗೆ ತರಲಾಯಿತು. ಹೀಗೆ ಒಗ್ಗೂಡಿದ ಭಾರತಕ್ಕೆ ಅಗತ್ಯವಿದ್ದ ಸಂವಿಧಾನ ರಚನೆಗೆ ಡಾ. ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿ, ಅದರ ಮೂಲಕ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನವನ್ನು 1949ರ ನ.26ರಂದು ಅಂಗೀಕರಿಸಲಾಯಿತು. ಆದರೆ, ಅದನ್ನು 1950ರ ಜನವರಿ 26ರಿಂದ ಜಾರಿಗೆ ತರಲಾಯಿತು ಎಂದು ಗಣರಾಜ್ಯೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.

ಸಂವಿಧಾನ ಜಾರಿಗೆ ಬಂದು ರಾಜ ಪ್ರಭುತ್ವ ಕೊನೆಗೊಂಡು ನಿಜವಾದ ಅರ್ಥದದಲ್ಲಿ ಪ್ರಜಾಸತ್ತಾತ್ಮಕ, ಸಮಾಜವಾದಿ, ಸಾರ್ವಭೌಮ ಗಣರಾಜ್ಯವಾಗಿ ರೂಪುಗೊಂಡ ಭಾರತ ಕಳೆದ 70 ವರ್ಷಗಳ ಅವಧಿಯಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿದೆ. ಈ ದೇಶದ ಸರಕಾರಗಳು ಎಲ್ಲಾ ಜಾತಿ, ಧರ್ಮ, ಭಾಷೆಗಳ ಗಡಿಗಳನ್ನು ಮೀರಿ ಸರ್ವ ಜನರ ಹಿತಕ್ಕಾಗಿ ಶ್ರಮಿಸುತ್ತಿವೆ ಎಂದು ಅವರು ಹೇಳಿದರು.

ಧ್ವಜಾರೋಹಣದ ಬಳಿಕ ಪಥಸಂಚಲನದ ಪರಿವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ವಂದನೆ ಸ್ವೀಕರಿಸಿದರು. ಪೆರೇಡ್ ಕಮಾಂಡರ್ ರಾಚಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ದಳ, ಸಿವಿಲ್ ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ, ನಗರದ ವಿವಿಧ ಶಾಲೆ ಕಾಲೇಜುಗಳ ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಸೇರಿದಂತೆ ಸುಮಾರು 20 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯ, ಮಡಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆ, ಬಸವನಹಳ್ಳಿಯ ಆಶ್ರಮ ಶಾಲೆ, ಮಡಿಕೇರಿಯ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗಣರಾಜ್ಯೋತ್ಸವದ ನಿಮಿತ್ತ ನಡೆಸಲಾಗಿದ್ದ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಬಸವನಹಳ್ಳಿ ಆಶ್ರಮ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ವಿಭಿನ್ನವಾಗಿ ಗಮನಸೆಳೆಯಿತು.

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಇದೇ ಸಂದರ್ಭ ಗೌರವಿಸಲಾಯಿತು.

 ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ರಾಜಶೇಖರ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಜಿ.ಪಂ. ಅಧೀಕ್ಷಕಿ ವಿಮಲಾ, ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಜಿಲ್ಲಾಸ್ಪತ್ರೆಯ ದಾದಿ ಬಿ.ವಸಂತಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಷಣ್ಮುಖ, ಅಮ್ಮತ್ತಿ ಹೋಬಳಿಯ ಗ್ರಾಮ ಲೆಕ್ಕಿಗ ಅನೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಿ.ಪಿ.ಸವಿತಾ, ಪೊನ್ನಂಪೇಟೆ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪಿ.ಸಿ.ಸ್ವಪ್ನಾ, ಪಶುವೈದ್ಯ ಇಲಾಖೆಯ ಸತೀಶ್ ಅವರು ಈ ಬಾರಿಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News