ವಿದ್ಯಾರ್ಥಿಗಳೇ, ಧೈರ್ಯ-ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2020-01-28 18:16 GMT

ಬೆಂಗಳೂರು, ಜ.28: ಪಬ್ಲಿಕ್ ಪರೀಕ್ಷೆ ಎದುರಿಸುವ ಎಸೆಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಲಹೆ ನೀಡಿದರು.

ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರತಿ ತಿಂಗಳು ನಡೆಯುವ ಸಂವೇದನಾ-ಫೋನ್ ಇನ್ ಕಾರ್ಯಕ್ರಮದ 3ನೇ ಆವೃತ್ತಿಯಲ್ಲಿ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಕುರಿತ ಸಂದೇಹಗಳನ್ನು ಸಚಿವರಿಗೆ ಹೇಳಿಕೊಂಡಾಗ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂದು ಅವರು ವಿವರಿಸಿದರು.

ಹಳಿಯಾಳ ತಾಲೂಕಿನ ವಿದ್ಯಾರ್ಥಿನಿ ತಮ್ಮ ಕಾಲೇಜಿನಲ್ಲಿ ಶೌಚಾಲಯದ ಕೊರತೆ ಇರುವ ಪ್ರಶ್ನೆ ಕೇಳಿದ್ದ ಹಿನ್ನೆಲೆಯಲ್ಲಿ ಮರುದಿನವೇ ಆ ಕಾಲೇಜಿಗೆ ಶೌಚಾಲಯ ನಿರ್ಮಾಣಕ್ಕೆ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಬಹುತೇಕ ಪ್ರಶ್ನೆಗಳು ಎಸೆಸೆಲ್ಸಿ ಪರೀಕ್ಷೆಯ ವಿಧಾನ, ಅಂಕಗಳ ವಿವರ, ಸಮಯ ನಿಗದಿ ಕುರಿತೆ ಇರುವುದರಿಂದ ಈ ಪ್ರಶ್ನೆಗಳಿಗೆ ಪಿಯು ಮತ್ತು ಪ್ರೌಢಶಿಕ್ಷಣ ನಿರ್ದೇಶಕರ ಸಹಾಯದೊಂದಿಗೆ ಸಚಿವರು ಉತ್ತರ ನೀಡಿದರು.

ಕಳೆದ ಬಾರಿಯಂತೆಯೆ ಈ ಬಾರಿಯೂ ಪ್ರಶ್ನೆಗಳು ಇರುತ್ತವೆ. ಪ್ಯಾಟ್ರನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಎಸೆಸೆಲ್ಸಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗಣಿತ ಮತ್ತು ಆಂಗ್ಲ ಪತ್ರಿಕೆಗಳಿಗೆ ಉತ್ತರಿಸುವ ಸಮಯವನ್ನು ಹೆಚ್ಚಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಪಠ್ಯದ ಮಧ್ಯಭಾಗದಿಂದ ಪ್ರಶ್ನೆ ಕೇಳಿದರೆ ಉತ್ತರಿಸುವುದು ಕಷ್ಟವಾಗುತ್ತದೆ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಡೀ ಪಾಠವನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ, ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ಬರೆಯಬಹುದು. ಅಂತಹ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ನಾನು ಚೆನ್ನಾಗಿ ಓದುತ್ತೇನೆ, ಪರೀಕ್ಷಾ ಕೊಠಡಿಗೆ ಹೋದಾಗ ಹೆದರಿಕೆಯಾಗುತ್ತೆ ಏನು ಮಾಡಬೇಕು ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೀನು ಚೆನ್ನಾಗಿ ಓದಿದ ಮೇಲೆ ಹೆದರುವ ಅಗತ್ಯವೇ ಇರುವುದಿಲ್ಲ, ನೀನು ಚೆನ್ನಾಗಿ ಓದು, ಧೈರ್ಯದಿಂದ ಪರೀಕ್ಷೆ ಬರೆ, ಪಾಸಾಗುವದನ್ನು ನಾನು ಖಚಿತಪಡಿಸುತ್ತೇನೆ ಎಂದು ಅಭಯ ನೀಡಿದರು. ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಬೆಂಗಳೂರಿನ ನಾಗರಭಾವಿ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ, ಇನ್ನು ಶಾಲಾ ಕಾಲೇಜುಗಳಲ್ಲಿ ಎನ್ನೆಸೆಸ್ಸ್ ಯೋಜನೆಯನ್ನು ಇನ್ನಷ್ಟು ಬಲಗೊಳಿಸಿ ಸಮಾಜ ಸೇವೆಗೆ ಮಕ್ಕಳನ್ನು ಚೆನ್ನಾಗಿ ತಯಾರು ಮಾಡಲು ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಪಿಯುಸಿ ಮತ್ತು ಸಿಇಟಿಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಿ ಓದಬೇಕು ಎಂಬ ಗೊಂದಲದಲ್ಲಿದ್ದೇನೆ ಎಂಬ ಪಿಯು ವಿದ್ಯಾರ್ಥಿಯ ಪಶ್ನೆಗೆ, ಮೊದಲು ಪಿಯು ಪರೀಕ್ಷೆಗೆ ಸಿದ್ಧನಾಗು, ಪರೀಕ್ಷೆ ಮುಗಿದ ಗಳಿಗೆಯಲ್ಲೆ ಸಿಇಟಿ ಪರೀಕ್ಷೆಗೆ ಓದುವುದನ್ನು ಶುರು ಮಾಡು. ಪಿಯು ಪರೀಕ್ಷೆ ಚೆನ್ನಾಗಿ ಮಾಡಿದರೆ ಸಿಇಟಿ ಪರೀಕ್ಷೆ ಬರೆಯಲು ಸುಲಭವಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದ ವಿವಿಧೆಡೆಯ ಪೋಷಕರು, ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 36 ಮಂದಿಯಿಂದ 42 ಪ್ರಶ್ನೆಗಳಿಗೆ ಸುರೇಶ್ ಕುಮಾರ್ ಉತ್ತರಿಸಿದರು.

ಪರೀಕ್ಷೆಗಳು ನಿಜಕ್ಕೂ ಸುಲಭವಾಗಿರುತ್ತವೆ. ವಿದ್ಯಾರ್ಥಿಗಳು ಮೊದಲು ಚೆನ್ನಾಗಿ ಓದಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು. ಬೆಳಗ್ಗೆ ಬೇಗ ಎದ್ದು ಸಮಯ ವಿಭಜಿಸಿಕೊಂಡು ಓದಬೇಕು. ಪರೀಕ್ಷಾ ಕೊಠಡಿಯನ್ನು ಒಂದು ಆಟದ ಮೈದಾನವೆಂದು ತಿಳಿದು, ಮೊದಲು ತಮಗೆ ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ, ನಂತರ ಉಳಿದ ಪ್ರಶ್ನೆಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತರಿಸುವಾಗ ಕೀ ಉತ್ತರಗಳಲ್ಲಿ ಬಳಸಿರುವ ಪದಗಳ ಬದಲು ಅದಕ್ಕೆ ಸನಿಹದ ಪದಗಳನ್ನು ಬಳಸಿದರೂ ಅಂಕಗಳು ದೊರೆಯುತ್ತವೆ ಎಂದು ಕೆಎಸ್‌ಇಇಬಿ ನಿರ್ದೇಶಕಿ ಸುಮಂಗಲಾ ಹೇಳಿದರು. ಇದರಿಂದ ವಿದ್ಯಾರ್ಥಿಗಳ ಜ್ಞಾಪಕ ಮತ್ತು ಸ್ಕಿಲ್ ಸಾಮರ್ಥ್ಯ ಓರೆಗೆ ಹಚ್ಚಲು ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇವೆಲ್ಲ ನಿಮ್ಮ ಮುಂದಿನ ಉದ್ಯೋಗಕ್ಕಾಗಿ ಬರೆಯುವ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸರಕಾರಿ ಕಾಲೇಜಿನ ಉಪನ್ಯಾಸಕರಿಗೆ ನೀಡಲಾಗುವ ವಿಶ್ವಾಸಕಿರಣ ತರಬೇತಿಯನ್ನು ಇನ್ನು ಮುಂದೆ ಎಲ್ಲ ಕಾಲೇಜುಗಳಿಗೂ ವಿಸ್ತರಿಸುವ ಕುರಿತು ಚಿಂತಿಸಲಾಗುವುದು ಎಂದು ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ ಹೇಳಿದರು. ಫೋನ್ ಇನ್‌ನಲ್ಲಿ ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ, ಪ್ರೌಢಶಿಕ್ಷಣ ನಿರ್ದೇಶಕ ಕರಿಚೆನ್ನಣ್ಣವರ್ ಹಾಜರಿದ್ದರು.

ಶ್ರವಣ ದೋಷವಿರುವ ಮಕ್ಕಳಿಗೆ ಪರೀಕ್ಷೆಯಲ್ಲಿ ಸೈನ್ ಲಾಂಗ್ವೇಜ್ ಹೇಳಲು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರ ಅಗತ್ಯವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಈ ರೀತಿಯ ಪ್ರಶ್ನೆ ಇದೇ ಮೊದಲು ಬಂದಿರುವುದರಿಂದ ಈ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚಿಸಿ ಯಾವ ಪರಿಹಾರ ಒದಗಿಸಬಹುದು ಎಂಬುದರ ಕುರಿತು ಚಿಂತಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News