ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜ.29: ರಾಜ್ಯದ ಬಿಜೆಪಿ ಸರಕಾರ ಇದುವರೆಗೂ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭ ಪ್ರಕ್ರಿಯೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಈ ಕುರಿತು ಬುಧವಾರ ಟ್ವಿಟ್ ಮಾಡಿರುವ ಅವರು, ಕಲ್ಬುರ್ಗಿಯಲ್ಲಿ 33 ವರ್ಷಗಳ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನಕ್ಕೆ ಒಂದು ವಾರ ಇರುವಾಗ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಇರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ಹಾಗಿಲ್ಲ .ಅಷ್ಟೇ ಅಲ್ಲದೆ, ಈಗಿನ ಬಿಜೆಪಿ ಸರಕಾರದ ನಿರ್ಲಕ್ಷತನದಿಂದಾಗಿ ಈವರೆಗೂ ಸಮ್ಮೇಳನದ ಖರ್ಚಿಗೆ ಹಣವೇ ಬಿಡುಗಡೆಯಾಗಿಲ್ಲ ಎಂದರು.
ನಾನು ಮಂತ್ರಿಯಾಗಿದ್ದ ವೇಳೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಪತ್ರ ಬರೆದು ಈ ಬಾರಿ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವಂತೆ ಕೋರಿ, ಸಂಪೂರ್ಣ ನೆರವು ನೀಡುವುದಾಗಿ ತಿಳಿಸಿದ್ದೆ. ಆದರೆ, ದುರ್ದೈವ ಅನ್ನುವ ಹಾಗೆ ನಾವು ಅಧಿಕಾರದಲ್ಲಿ ಇಲ್ಲದಾಗ ಸಮ್ಮೇಳನ ಬಂದಿದೆ. ಇದ್ದಿದ್ದರೆ, ಮುತುವರ್ಜಿ ವಹಿಸಿ ಸಮ್ಮೇಳನವನ್ನು ಯಶಸ್ವಿಯಾಗಿಸುತ್ತಿದ್ದೆವು ಎಂದು ತಿಳಿಸಿದ್ದಾರೆ.
‘ಕಾಂಗ್ರೆಸ್ ಹಣ’
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿಜೆಪಿ ಸರಕಾರ ಅಸಡ್ಡೆ ತೋರುತ್ತಿದ್ದು, ಇಲ್ಲಿ ನಡೆಯುವ ಸಮ್ಮೇಳನದ ಸಾರಿಗೆ ವೆಚ್ಚವನ್ನು ಜಿಲ್ಲಾ ಕಾಂಗ್ರೆಸ್ ವಹಿಸಿಕೊಂಡಿದೆ. ಸಮ್ಮೇಳನದ ಖರ್ಚಿಗೂ ದೇಣಿಗೆ ಸಂಗ್ರಹವನ್ನು ಆರಂಭಿಸಲಾಗಿದೆ.
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ