ಸಾಹಿತ್ಯ ಪ್ರೇಮಿಗಳನ್ನು ಆಕರ್ಷಿಸುತ್ತಿರುವ ಪುಸ್ತಕ ಮಳಿಗೆಗಳು

Update: 2020-02-06 17:14 GMT

ಕಲಬುರಗಿ, ಫೆ.6: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ದಾಖಲೆಯಷ್ಟು ಪುಸ್ತಕ ಮಳಿಗೆಗಳು ಹಾಕಿದ್ದು, ಅಕ್ಷರ ಜಾತ್ರೆಗೆ ಬರುತ್ತಿರುವ ಸಾಹಿತ್ಯ ಪ್ರೇಮಿಗಳಿಗೆ, ಪುಸ್ತಕಗಳ ಓದುಗರಿಗೆ ಭೂರಿ ಭೋಜನ ಸಿಕ್ಕಿದಂತಹ ಅನುಭವವಾಗುತ್ತಿದೆ.

ಸಾಹಿತ್ಯ ಪ್ರಿಯರು ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಪುಸ್ತಕ ಪ್ರೇಮಿಗಳು ಪುಸ್ತಕ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪುಸ್ತಕ ಖರೀದಿಸುತ್ತಿದ್ದಾರೆ. ಸಮ್ಮೇಳನ ಆರಂಭದ ದಿನದಂದೇ ಹೆಚ್ಚಿನ ಪುಸ್ತಕ ವ್ಯಾಪಾರ ಕಂಡುಬಂದಿದ್ದು ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ವಹಿವಾಟು ನಡೆದಿದೆ.

ಈ ಪುಸ್ತಕ ಮಳಿಗೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ದೊಡ್ಡ ಮಳಿಗೆಗಳಿದ್ದು, ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಗಳು, ಧಾರ್ಮಿಕ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಜ್ಞಾನ ಮಂಜರಿಗಳ ಪ್ರಕಾಶಕರು, ಕೃಷಿ, ಯೋಗ, ಶಿಕ್ಷಣ, ಮಕ್ಕಳ ಸಾಹಿತ್ಯ, ವಚನ, ದಾಸ ಹಾಗೂ ದಲಿತ ಸಾಹಿತ್ಯ ಸೇರಿದಂತೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಿಗಾಗಿಯೇ ಮೀಸಲಿರುವ ಪ್ರಕಾಶನ ಸಂಸ್ಥೆಗಳು ಹಾಗೂ ಸಣ್ಣ ಪುಟ್ಟ ನೂರಾರು ಪ್ರಕಾಶಕರು, ಬುಕ್ ಸ್ಟಾಲ್ ನವರು ಪಾಲ್ಗೊಂಡಿದ್ದು, ಕನ್ನಡ ಸಾಹಿತ್ಯದ ಹರವು ಹಾಗೂ ಕನ್ನಡ ಪುಸ್ತಕ ಪ್ರಪಂಚದ ಶ್ರೀಮಂತಿಕೆ ಅನಾವರಣಗೊಂಡಿದೆ.

ಮೂರು ವಿಭಾಗಗಳಲ್ಲಿ ಮಳಿಗೆ ವಿಂಗಡನೆ: ಈ ಬಾರಿ ಸಮ್ಮೇಳದಲ್ಲಿ ಮೂರು ಪುಸ್ತಕ ಮಳಿಗೆಗಳ ವಿಭಾಗಗಳು ಇದ್ದವು. ಅದರಲ್ಲಿ ಬಹುತೇಕ ದೊಡ್ಡ ಪುಸ್ತಕ ಮಾರಾಟಗಾರರ ಮಳಿಗೆಗೆಳು ಒಂದನೇ ವಿಭಾಗದಲ್ಲಿ ಇದ್ದವು. ಆ ವಿಭಾಗಕ್ಕೆ ಜನ ಸ್ವಲ್ಪ ಜಾಸ್ತಿ ಬಂದರು. ಉಳಿದೆರಡು ವಿಭಾಗಗಳ ಕಡೆಗೆ ಜನರ ಗಮನ ಕಡಿಮೆಯಾಯಿತು ಅನ್ನುವುದು ಅನೇಕರಿಗೆ ಕೊಂಚ ಬೇಸರಕ್ಕೆ ಕಾರಣವಾಯಿತು. ಕೆಲವು ಅಂಗಡಿಗಳು ಒಳ್ಳೆಯ ಮಾರಾಟ ದಾಖಲಿಸಿದರೆ ಅನೇಕರು ಪರವಾಗಿಲ್ಲ ಎಂಬಲ್ಲಿಗೆ ಮಾತು ಮುಗಿಸಿದ ದೃಶ್ಯ ಕಂಡುಬಂತು.

ಪುಸ್ತಕ ಪ್ರಿಯರನ್ನು ಆಕರ್ಷಿಸಲು ಹಾಗೂ ತಮ್ಮ ಪುಸ್ತಕ ಮಾರಾಟ ತೀವ್ರತೆ ಪಡೆದುಕೊಳ್ಳುವ ಸಲುವಾಗಿ ಶೇ.10 ರಿಂದ 50 ರವರೆಗೆ ರಿಯಾಯತಿ ಮಾರಾಟ ಬಹುತೇಕ ಮಳಿಗೆಗಳಲ್ಲೂ ಕಂಡುಬರುತ್ತಿದೆ. ಕೆಲವು ಪ್ರಕಾಶನಗಳು ಹಳೆಯ ಪುಸ್ತಕಗಳಿಗೆ ಶೇ.50 ಕ್ಕಿಂತ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದರೆ, ಕೆಲವರು ಒಂದು ಪುಸ್ತಕ ಖರೀದಿಸಿದರೆ, ಇನ್ನೊಂದು ಉಚಿತ ಎನ್ನುವ ಫಲಕ ಹಾಕಿ ವ್ಯವಹಾರ ಹೆಚ್ಚಿಸಿಕೊಂಡಿದ್ದಾರೆ.

ಸುವ್ಯವಸ್ಥಿತ ಮಳಿಗೆಗಳು: ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಸುವ್ಯವಸ್ಥಿತವಾದ ಸ್ಥಳಾವಕಾಶ ಒದಗಿಸಿದ್ದು, ಮಳೆ, ಬಿಸಿಲಿಗೂ ತೊಂದರೆಯಾಗದ ರೀತಿ ಆಧುನಿಕವಾಗಿ ಗುಣಮಟ್ಟದ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಪ್ರಕಾಶಕರು ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದು, ಅದರಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್ ನವಕರ್ನಾಟಕ ಪ್ರಕಾಶನ, ಗದುಗಿನ ಲಡಾಯಿ ಪ್ರಕಾಶನ, ಶಿವಕುಮಾರ ಏಜೆನ್ಸಿ, ನವ ಜ್ಯೋತಿ ಪ್ರಕಾಶನ, ವಿಜಯಪುರದ ಪ್ರಿಯದರ್ಶಿನಿ ಪ್ರಕಾಶನ, ಶಾಬಾದಿಮಠ ಪ್ರಕಾಶನ, ಗಣೇಶ ಪ್ರಕಾಶನ, ಶಿವಮೊಗ್ಗದ ಚಿರಂತನ ಬುಕ್ ಹೌಸ್, ಅಭಿರುಚಿ ಪ್ರಕಾಶನ ಮೈಸೂರು, ಕಲಬುರ್ಗಿಯ ಸ್ನೇಹ ಪ್ರಕಾಶನ, ಸಿದ್ದಲಿಂಗೇಶ್ವರ ಬುಕ್ ಡಿಪೋ ಸೇರಿದಂತೆ ಹಲವು ಪ್ರಕಾಶನಗಳು, ಪ್ರಕಾಶಕರು ಪಾಲ್ಗೊಂಡಿದ್ದಾರೆ.

ಇನ್ನುಳಿದಂತೆ, ಮೈಸೂರು ವಿಶ್ವವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ, ಕಲಬುರ್ಗಿಯ ಶರಣಬಸವ ವಿವಿ ಪ್ರಸಾರಾಂಗಗಳು ಪುಸ್ತಕ ಪ್ರದರ್ಶನದಲ್ಲಿ ಸುಲಭ ಬೆಲೆಯ ಅವತರಣಿಕೆಗಳು ಪುಸ್ತಕ ಪ್ರಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು. ಅಲ್ಲದೆ, ಪುಸ್ತಕ ಪ್ರಕಾಶನದಲ್ಲಿ ಧಾರ್ಮಿಕ ಸಾಹಿತ್ಯ ಗಮನ ಸೆಳೆಯುವಂತಿದ್ದು, ಕಲಬುರ್ಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮ, ಬೆಂಗಳೂರು ಇಸ್ಕಾನ್ ಟೆಂಪಲ್ ನವರು ಶ್ರೀಕೃಷ್ಣ ಭಗವಾನ್ ಕುರಿತು, ಬಸವಣ್ಣವರು, ಡಾ. ಅಂಬೇಡ್ಕರ್ ಅವರ ಸಮಗ್ರ ಸಂಪುಟಗಳನ್ನು ಒಳಗೊಂಡ ಪುಸ್ತಕಗಳ ಮಾರಾಟ ಜೋರಾಗಿತ್ತು. ಪವಿತ್ರ ಕುರ್ಆನ್ ಹಾಗೂ ಇಸ್ಲಾಂ ಧರ್ಮದ ಕುರಿತಾದ ಇತರೆ ಪ್ರಕಟಣೆಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದುದು ಕಂಡುಬಂತು.

ಶಾಲೆಗಳಲ್ಲಿ ಶಿಕ್ಷಕರಿಗೆ ಬೋಧಿಸಲು ಅನುಕೂಲವಾಗುವಂತೆ, ದೊಡ್ಡ ಅಳತೆಯ ಪಟಗಳನ್ನು, ಬೋಧನಾ ಮಾದರಿಗಳನ್ನು ತಯಾರಿಸಿದ್ದು, ಮಳಿಗೆಗಳ ಮೇಲೆಯೇ 'ಶಿಕ್ಷಕರಿಗೆ ಮಾತ್ರ' ಎಂಬ ಹೆಸರಿಟ್ಟಿದ್ದು, ಶಿಕ್ಷಕರನ್ನು ಆಕರ್ಷಿಸುವಂತಿತ್ತು. ಇಂಗ್ಲೀಷ್ ನಲ್ಲಿ ಕಾಲಗಳ ಕಲಿಕೆಗೆ ಪಾಠವನ್ನು ಸಿದ್ಧಗೊಳಿಸಿ ಮಾರಾಟಕ್ಕಿರಿಸಿದೆ. ಕರ್ನಾಟಕ, ವಿಶ್ವ ಭೂಪಟ, ಭಾರತದೇಶ, ಕಲಬುರ್ಗಿ ಜಿಲ್ಲೆಯ ನಕ್ಷೆಗಳನ್ನು ದೊಡ್ಡ ಅಳತೆ, ಪೋಸ್ಟರ್ ಗಳ ಅಳತೆಯಲ್ಲಿ ತಯಾರಿಸಿ, ಮಾರಾಟಕ್ಕೆಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News