ಲೈಸೋಸೋಮ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಕೇಂದ್ರದಿಂದ ಹಣದ ನೆರವು ಪಡೆಯಿರಿ
ಬೆಂಗಳೂರು, ಫೆ.14: ರಾಜ್ಯದಲ್ಲಿ ಲೈಸೋಸೋಮ್ ಸಮಸ್ಯೆಯಿಂದ(ಎಲ್ಎಸ್ಡಿ) ಬಳಲುತ್ತಿರುವ 47 ಮಕ್ಕಳ ಚಿಕಿತ್ಸೆಗೆ ರಾಜ್ಯ ಸರಕಾರ ಈ ಕೂಡಲೇ ಕೇಂದ್ರದಿಂದ ನೆರವು ಪಡೆಯಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದೆ.
ಕರ್ನಾಟಕದಲ್ಲಿ ಲೈಸೋಸೋಮ್ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಹೊಸದಿಲ್ಲಿ ಮೂಲದ ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ಸ್ ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಲೈಸೋಸೋಮ್ ಸಮಸ್ಯೆಯಿಂದ ರಾಜ್ಯದಲ್ಲಿ 47 ಮಕ್ಕಳು ಬಳಲುತ್ತಿದ್ದಾರೆ. ಕೇಂದ್ರ ಸರಕಾರ ಈ ಕೂಡಲೇ ಚಿಕಿತ್ಸೆಗಾಗಿ ಹಣವನ್ನು ಬಿಡುಗಡೆ ಮಾಡಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು. ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ತಕ್ಷಣವೇ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿತು.
ಲೈಸೋಸೋಮ್ ಸಮಸ್ಯೆ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾಗುವವರಲ್ಲಿ 14 ರ್ಷದ ಒಳಗಿನ ಮಕ್ಕಳೆ ಹೆಚ್ಚು. ಒಂದು ಮಗುವಿನ ಪ್ರಾಥಮಿಕ ಚಿಕಿತ್ಸಾ ವೆಚ್ಚವೇ ಸುಮಾರು 20 ಲಕ್ಷಕ್ಕೂ ಮಿಗಿಲಾಗುತ್ತದೆ. ಹೀಗಾಗಿ, ಈ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಅರ್ಜಿದಾರರ ಕೋರಿಕೆ.